ಸಾರವಾಡ ಮತ್ತು ಸುತ್ತಮುತ್ತಲಿನ ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಾರವಾಡ ಮತ್ತು ಸುತ್ತಮುತ್ತಲಿನ ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ₹10 ಕೋಟಿ ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್ವರೆಗೆ ಸುಧಾರಣೆ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ₹2 ಕೋಟಿ ಅನುದಾನದಲ್ಲಿ ಸಾರವಾಡ- ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ₹5 ಕೋಟಿ ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ, ₹2 ಕೋಟಿ ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ₹1 ಕೋಟಿ ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲಾಗುವುದು. ಬಬಲೇಶ್ವರ ಮತಕ್ಷೇತ್ರದಲ್ಲಿ ಸಾರವಾಡ ಗ್ರಾಮ ಹೃದಯದಲ್ಲಿದೆ. ಈ ಗ್ರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಈ ಗ್ರಾಮಸ್ಥರ ಉಪಕಾರ ನನ್ನ ಮೇಲಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಗೆ ಬಂದು ನನ್ನನ್ನು ಸೋಲಿಸಲು ಭರ್ಜರಿ ಪ್ರಚಾರ ಮಾಡಿದರೂ ಸಾರವಾಡ ಗ್ರಾಮಸ್ಥರು ನನಗೆ 1600 ಮತಗಳ ಲೀಡ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ಸಾರವಾಡ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಹಂತದಲ್ಲಿ ತಲಾ ₹50 ಲಕ್ಷದಂತೆ ಒಟ್ಟು ₹1 ಕೋಟಿ ಅನುದಾನ ನೀಡುತ್ತೇನೆ. ಮತಕ್ಷೇತ್ರದ 100 ಸರ್ಕಾರಿ ಶಾಲೆಗಳ ಪೈಕಿ ಈಗಾಗಲೇ 58 ಶಾಲೆಗಳಲ್ಲಿ ಕ್ರೀಡಾ ಸಲಕರಣೆಗಳನ್ನು ಅಳವಡಿಸಲಾಗಿದೆ. ಸಾರವಾಡದಲ್ಲಿ ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಾಡಲಾಗುವುದು. ಬಾಲಕಿಯರ ಮತ್ತು ಉರ್ದು ಶಾಲೆಯನ್ನೂ ಅಭಿವೃದ್ಧಿಪಡಿಸಲಾಗುವುದು. ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.ಸಾರವಾಡದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ, ಡೋಣಿ ಸೇತುವೆ ಅಗಲೀಕರಣ ಮಾಡಲಾಗುವುದು. ಗ್ರಾಮದಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತವಾಗಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ 123 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು. ದದಾಮಟ್ಟಿ- ಜುಮನಾಳ ಕ್ರಾಸ್ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು. ಡೋಣಿ ನದಿ ಹೂಳೆತ್ತುವ ಯೋಜನೆ ಪರಿಷ್ಕೃತ ಯೋಜನೆಯನ್ನು ಕೇಂದ್ರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಒಂದು ವರ್ಷದೊಳಗೆ ಸಾರವಾಡ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಮುಖಂಡರಾದ ಚನ್ನಪ್ಪ ಕೊಪ್ಪದ, ಸೋಮನಾಥ ಕಳ್ಳಿಮನಿ ಮಾತನಾಡಿ, ರೈತ ಕಂಟೆಪ್ಪ ಕಣಬೂರ ಮಾತನಾಡಿದರು. ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ವಾಲಿ ಸಚಿವ ಎಂ.ಬಿ.ಪಾಟೀಲ ಅವರ ಕುರಿತು ಸ್ವರಚಿತ ಕವನ ವಾಚಿಸಿದರು.ಈ ವೇಳೆ ಸೊಕ್ಕೆ ಅತಿಥಿಮಠದ ಜಸಾರಂಗಪ್ಪಯ್ಯ ಮಹಾಸ್ವಾಮಿಗಳು, ಸಾರವಾಡ ಹಿರೇಮಠ ಶ್ರೀ ರೇಣುಕಾಸ್ವಾಮಿ ಹಿರೇಮಠ, ಮುಖಂಡರಾದ ಈರಗೊಂಡ ಬಿರಾದಾರ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ.ಗಂಗಾಧರ ಸಂಬಣ್ಣಿ, ಎಂ.ಎಸ್.ಪಾಟೀಲ, ಇಇ ಸಿ.ಎಸ್.ಪೋಲಿಸಪಾಟೀಲ, ಸಾರವಾಡ, ದದಾಮಟ್ಟಿ, ಕಣಮುಚನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.
