ಸಾರಾಂಶ
ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಿಸಿದೆ. ಚಿನ್ನದ ಬೆಲೆಯಂತೂ ದುಪ್ಪಟ್ಟಾಗಿದೆ. ಇ
ಕನ್ನಡಪ್ರಭ ವಾರ್ತೆ ಮೈಸೂರು
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಜನರಿಗೆ ತೊಂದರೆ ಕೊಡುತ್ತಿವೆ. ಬಿಜೆಪಿ ತೆರಿಗೆ ಏರಿಕೆ ಮಾಡಿದರೆ, ಕಾಂಗ್ರೆಸ್ ಬೆಲೆ ಏರಿಕೆ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಸಾಲ ಮನ್ನಾ ಮಾಡುವ ಕೆಂದ್ರ ಸರ್ಕಾರವು ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಿಸಿದೆ. ಚಿನ್ನದ ಬೆಲೆಯಂತೂ ದುಪ್ಪಟ್ಟಾಗಿದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಹಾಲು, ಮೊಸರು, ವಿದ್ಯುತ್, ನೀರು, ಮನೆ ಕಂದಾಯ ಹೆಚ್ಚಿಸಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಮುಂದ್ರಾಕ ಶುಲ್ಕ ಶೇ.300 ಏರಿಕೆಯಾಗಿದೆ. ಆಸ್ತಿಗಳ ಮೇಲಿನ ಮಾರ್ಗಸೂಚಿ ದರ, ವಾಹನಗಳ ನೋಂದಣಿ ಶುಲ್ಕ, ಮದ್ಯದ ಬೆಲೆ, ಪೆಟ್ರೋಲ್, ಡೀಸೆಲ್ ದುಬಾರಿಯಾಗಿದೆ. ಹಾಲಿನ ಬೆಲೆಯನ್ನು ಏರಿಕೆ ಮಾಡುತ್ತಲೇ ಇದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಿ-ಖಾತಾ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದಾರೆ. ಆಸ್ತಿ ತೆರಿಗೆ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರು ಜೀವಿಸುವುದೇ ಕಷ್ಟವಾಗಿದೆ ಎಂದು ಅವರು ಕಿಡಿಕಾರಿದರು.ಜನರಿಗೆ ತೆರಿಗೆ ಹೊರೆ ಹೊರಿಸಿ, ದಿನ ಬಳಕೆ ವಸ್ತುಗಳ ಬೆಲೆ ದುಬಾರಿಗೊಳಿಸಿ ಹಿಂಸಿಸುತ್ತಿರುವ ಸರ್ಕಾರವು, ಶಾಸಕರು ಮತ್ತು ಸಚಿವರ ವೇತನ, ಭತ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂಬ ಸತ್ಯ ಮನವರಿಕೆಯಾಗುತ್ತದೆ. ಹೀಗಾಗಿ, ಕೂಡಲೇ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಸಾಂವಿಧಾನಿಕ ಅಧಿಕಾರ ವಿಕೇಂದ್ರೀಕರಣ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷ ಎಂ. ಸೋಮಶೇಖರ್, ಕಾರ್ಯಕರ್ತರಾದ ಮೊಹಮ್ಮದ್ ಜಾಫರ್, ಸತೀಶ್, ಜಯಶ್ರೀ ಮೊದಲಾದವರು ಇದ್ದರು.