ಮಹಿಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡು ತನ್ನ ಸ್ವಾವಲಂಬನೆಯಿಂದ ಜೀವನ ನಡೆಸುವಲ್ಲಿ ಯಶಸ್ಸು ಕಂಡುಕೊಂಡಿರುವುದರಿಂದ ಹೆಣ್ಣು ಇವತ್ತು ಶೋಷಣೆಯಿಂದ ಹೊರಬರಲು ಸಾಧ್ಯವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ಅವಕಾಶ ವಂಚಿತರಾಗಬೇಡಿ, ಅವಕಾಶಗಳನ್ನು ಸೃಷ್ಠಿ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮೈಸೂರು ವಿಭಾಗ ಪ್ರಾದೇಶಿಕ ನಿರ್ದೇಶಕ ಬಿ. ಜಯಂತ ಪೂಜಾರಿ ಕರೆ ನೀಡಿದರು.ಮೈಸೂರು ಕಳಸ್ತವಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಂಕಲ್ಪ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕು ವ್ಯಾಪ್ತಿಯ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶ ವಂಚಿತರಾದವರು ಮತ್ತು ಆದರ್ಶ ಮಹಿಳೆಯರನ್ನು ಗಮನಿಸಿ ಇಂದಿನ ಮಹಿಳೆಯರು ಕ್ರಿಯಾಶೀಲಳಾಗಬೇಕು. ಅಡಿಗೆ ಮನೆಯಲ್ಲಿ ಇರಬೇಕಾದ ಮಹಿಳೆ ಅಡಿಗೆ ಮನೆಯಿಂದಲೇ ತನ್ನ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಇಂದು ಕುಟುಂಬದ ಕಣ್ಣಾಗಿದ್ದ ಮಹಿಳೆ ಇವತ್ತು ಸಮಾಜದ ಕಣ್ಣಾಗಿದ್ದಾಳೆ ಎಂದರು.ಮಹಿಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡು ತನ್ನ ಸ್ವಾವಲಂಬನೆಯಿಂದ ಜೀವನ ನಡೆಸುವಲ್ಲಿ ಯಶಸ್ಸು ಕಂಡುಕೊಂಡಿರುವುದರಿಂದ ಹೆಣ್ಣು ಇವತ್ತು ಶೋಷಣೆಯಿಂದ ಹೊರಬರಲು ಸಾಧ್ಯವಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಅಂಗವಿಕಲರಿಗೆ, ಆಂಧರಿಗೆ, ಬುದ್ಧಿಮಾಂದ್ಯ ನಿರ್ಗತಿಕ ಕುಟುಂಬಗಳಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆಶ್ರಯರಾಗಿದ್ದಾರೆ. ಜೊತೆಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಉಪಯೋಗವನ್ನು ನಿಜವಾದ ಫಲಾನುಭವಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.ಗ್ರಾಮಭಿವೃದ್ಧಿ ಯೋಜನೆ ಮೂಲಕ ಅರ್ಹತೆ ಇರುವ ಬಡ ಕುಟುಂಬಗಳನ್ನು ಗುರುತಿಸಿ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆಗಳ ನಿರ್ಮಾಣ ಮತ್ತು ನಿರ್ಗತಿಕರಿಗೆ ಮಾಸಾಶನ ವಿತರಣೆ, ವಾತ್ಸಲ್ಯ ಕಿಟ್ ವಿತರಣೆ ಮಾಡುವುದದೊಂದಿಗೆ ವಯೋವೃದ್ಧರ ಯೋಗಕ್ಷೇಮವನ್ನು ಸಹ ನೋಡಿಕೊಳ್ಳಲಾಗುತ್ತಿದೆ ಎಂದರು.ಸಾಮಾಜಿಕ ಕಾರ್ಯಕರ್ತ ವಿಕಾಸ್ ಶಾಸ್ತ್ರಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಪ್ರಯೋಜನವನ್ನು ಈ ಭಾಗದ ಸ್ವ-ಸಹಾಯ ಸಂಘದ ಸದಸ್ಯರು ಉತ್ತಮವಾಗಿ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಹೆಣ್ಣು ಸಮಾಜದ ಅಭಿವೃದ್ಧಿಯ ಕಣ್ಣು ಎಂದು ಬಣ್ಣಿಸಿದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಂರಕ್ಷಣಾಧಿಕಾರಿ ಸಂಗೀತಾ ಪೂಜಾರಿ, ಸ್ತ್ರೀ ರೋಗ ತಜ್ಞೆ ಡಾ. ಭಾರತಿ, ಯೋಜನೆಯ ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ, ಯೋಜನಾಧಿಕಾರಿಯಾದ ಪಿ. ಶಶಿರೇಖಾ, ಮೂಕಾಂಬಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ ಮೊದಲಾದವರು ಇದ್ದರು.