ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ದೇಶದ ಪ್ರತಿಷ್ಠಿತ ವೈದಕೀಯ ಕಾಲೇಜುಗಳಲ್ಲಿ ಒಂದಾಗಿರುವ ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಮಾರಂಭ ಇತ್ತೀಚೆಗೆ ನಡೆದಿದ್ದು, ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಪೈಕಿ ಕಾಲೇಜಿನ ಇತಿಹಾಸದಲ್ಲೇ ಅತ್ಯುನ್ನತ ಪದವಿ ಪುರಸ್ಕಾರ ಮತ್ತು ಗೌರವಗಳಿಗೆ ಪಾತ್ರರಾದ ಮೂಲತಃ ಕೊಡಗಿನವರಾದ ಲೆ.ಜ.ಡಾ. ಬಿ. ಎನ್. ಬಿ. ಎಂ. ಪ್ರಸಾದ್ ಎಸ್.ಎಂ.ವಿ.ಎಸ್.ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ದಾಕ್ಷಾಯಿಣಿ ಅವರು ಇತರ ಗಣ್ಯರ ಸಮುಖದಲ್ಲಿ ಡಾ. ಪ್ರಸಾದ್ ಅವರನ್ನು ಗೌರವಿಸಿದರು.ಡಾ.ಪ್ರಸಾದ್ ಈ ಕಾಲೇಜಿನಿಂದ 1977 ರಲ್ಲಿ ವೈದ್ಯರಾಗಿ ಹೊರಹೊಮ್ಮಿ ಭಾರತೀಯ ಭೂಸೇನೆಯನ್ನು ಸೇರಿದರು. ಸೇನೆಯಲ್ಲಿ ವಿವಿಧ ಜವಾಬ್ದಾರಿಗಳೊಂದಿಗೆ ಹಂತ ಹಂತವಾಗಿ ಪದನ್ನೋತಿ ಹೊಂದಿ ಅವರು ಭಾರತೀಯ ರಕ್ಷಣಾ ಪಡೆಗಳ ವೈದಕೀಯ ವಿಭಾಗದ ಮಹಾ ನಿರ್ದೇಶಕರಾಗಿ ಮುಖ್ಯ ಸಮಾಲೋಚಕರಾಗಿ ಜೊತೆಗೆ ಭಾರತ ರಾಷ್ಟ್ರಪತಿಗಳ ಗೌರವ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಗೌರವ ಪದವಿಗಳಿಗೆ ಪಾತ್ರರಾಗಿರುವ ಡಾ. ಪ್ರಸಾದ್ ತಮ್ಮ ನಿವೃತ್ತಿಯ ನಂತರ ಉತ್ತರ ಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಸಾದ್ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ನಾರಾಯಣ್ ಭಟ್ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿದ್ದಾರೆ.