ಡಾ.ಜಿ. ಪರಮೇಶ್ವರ ಅವರಿಗೆ ಎತ್ತರದ ಸ್ಥಾನ ಸಿಗಬೇಕು

| Published : Aug 26 2025, 01:02 AM IST

ಸಾರಾಂಶ

ಸಮಾಜದಲ್ಲಿ ಸಜ್ಜನರು, ನೇರ- ನುಡಿಯವರು ಕ್ರಮೇಣ ಕಡಿಮೆ ಆಗುತ್ತಿದ್ದಾರೆ. ಸ್ವಚ್ಛ ರಾಜಕಾರಣಕ್ಕೆ ಡಾ.ಜಿ. ಪರಮೇಶ್ವರ ಹೆಸರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಡಾ.ಜಿ. ಪರಮೇಶ್ವರ ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರಿಗೆ ಎತ್ತರದ ಸ್ಥಾನ ಸಿಗಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಆಶಿಸಿದರು.ನಗರದ ಕಲಾಮಂದಿರದಲ್ಲಿ ಡಾ.ಜಿ. ಪರಮೇಶ್ವರ ಅಭಿಮಾನಿಗಳ ಬಳಗವು ಸೋಮವಾರ ಆಯೋಜಿಸಿದ್ದ ಪರಮೋತ್ಸವದಲ್ಲಿ ಪರಮ ಪಯಣ ಅಭಿನಂದನಾ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಡಾ.ಜಿ. ಪರಮೇಶ್ವರ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಇದೆ. ಎಂದಿಗೂ ಅವರು ಸೋಲಬೇಕಿಲ್ಲ. ಅವರೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು. ಸಮಾಜದಲ್ಲಿ ಸಜ್ಜನರು, ನೇರ- ನುಡಿಯವರು ಕ್ರಮೇಣ ಕಡಿಮೆ ಆಗುತ್ತಿದ್ದಾರೆ. ಸ್ವಚ್ಛ ರಾಜಕಾರಣಕ್ಕೆ ಡಾ.ಜಿ. ಪರಮೇಶ್ವರ ಹೆಸರಾಗಿದ್ದಾರೆ. ಶಿಕ್ಷಣ ಸಂಸ್ಥೆ ಮೂಲಕ ಯುವಕರ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದರು.ಶಾಸಕ ಕೆ. ಹರೀಶ್‌ ಗೌಡ ಮಾತನಾಡಿ, ಡಾ.ಜಿ. ಪರಮೇಶ್ವರ ಅವರಿಗೆ ಉನ್ನತ ಸ್ಥಾನಮಾನ ಸಿಗಬೇಕು ಎಂದು ಆಶಿಸಿದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಗೃಹ ಸಚಿವರಾದ ಡಾ.ಜಿ. ಪರಮೇಶ್ವರ ಅವರೊಂದಿಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇರುವುದಾಗಿ ಹೇಳಿದರು.