ಸಾರಾಂಶ
ಶಂಕರಚಾರ್ಯರ ಮಠದ ಕೆಲ ಸ್ವಾಮೀಜಿಗಳು ರಾಜಕೀಯ ಕಾರಣಕ್ಕಾಗಿ ಆಯೋಧ್ಯೆ ಶ್ರೀ ರಾಮಮಂದಿರ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಶಂಕರಚಾರ್ಯರ ಮಠದ ಕೆಲ ಸ್ವಾಮೀಜಿಗಳು ರಾಜಕೀಯ ಕಾರಣಕ್ಕಾಗಿ ಆಯೋಧ್ಯೆ ಶ್ರೀ ರಾಮಮಂದಿರ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಠದ ಕೆಲ ಸ್ವಾಮೀಜಿಗಳ ರಾಜಕೀಯ ಸಿದ್ಧಾಂತಗಳು ಜನರಿಗೆ ಗೊತ್ತಿವೆ. ಮೋದಿ ಸೋಲಿಸಲೇ ಬೇಕೆಂದು ಹೋರಾಟ ಮಾಡಿದ ಕೆಲ ಸ್ವಾಮೀಜಿಗಳೂ ಇದರಲ್ಲಿದ್ದಾರೆ. ಅವರಿಂದ ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ ಎಂದು ಪ್ರಶ್ನಿಸಿದರು.
ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರ ಪೂರ್ಣವಾಗಿಲ್ಲ ಎನ್ನುವವರಿಗೆ ಪರಿಪೂರ್ಣ ಜ್ಞಾನ ಇಲ್ಲ. ಯಾವ ದೇವಸ್ಥಾನಗಳೂ ಒಂದೇ ಕಾಲದಲ್ಲಿ ಪೂರ್ಣವಾಗುವುದಿಲ್ಲ. ಕಾಲದಿಂದ ಕಾಲಕ್ಕೆ ಅವು ಪೂರ್ಣಗೊಳ್ಳುತ್ತವೆ. ದೇವಸ್ಥಾನದ ಗರ್ಭಗುಡಿಯ ಪ್ರಾಣ ಪ್ರತಿಷ್ಠಾಪನೆ ಯಾವತ್ತಿಗೂ ಬಹಳ ಮುಖ್ಯ. ಉಳಿದ ಕಾಮಗಾರಿಗಳು ಬಹಳಷ್ಟು ವರ್ಷ ನಡೆಯುತ್ತವೆ. ಹಿಂದಿನ ರಾಜಮನೆತನದವರು ಕಟ್ಟಿಸಿದ ದೇವಸ್ಥಾನದ ವಿಚಾರ ಗೊತ್ತಿದ್ದರೆ ರಾಮಮಂದಿರವೂ ಅಪೂರ್ಣ ಎನಿಸುವುದಿಲ್ಲ ಎಂದು ತಿರುಗೇಟು ನೀಡಿದರು.ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಆಸೆಗಾಗಿ ಸಚಿವ ಕೆ.ಎನ್.ರಾಜಣ್ಣ ಅವರು ಅಸಂಬದ್ಧ ಮಾತು ಆಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದವರು ಶ್ರೀರಾಮನನ್ನು ಎದೆ ಗೂಡಲ್ಲಿಟ್ಟುಕೊಂಡಿರುತ್ತಾರೆ. ರಾಜಣ್ಣ ಅದೇ ಸಮುದಾಯಕ್ಕೆ ಸೇರಿದವರು. ಇಂಥವರು ಟಿಪ್ಪು ಜಯಂತಿ ಆಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಓಲೈಸಲು ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ. ಇಂಥವರಿಗೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.