ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಬೆಂಗಳೂರು ನಗರದ ನಿರ್ಮಾತೃ, ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಲ್ಲ. ಅವರು ಸರ್ವ ಜನಾಂಗಗಳ ನಾಯಕ ಎಂದು ಇತಿಹಾಸ ತಜ್ಞ ಡಾ.ಹಂ.ಗು.ರಾಜೇಶ್ ಹೇಳಿದರು.ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗ ನೌಕರರ ಸಂಘ, ಕಾಲಭೈರವೇಶ್ವರ ಮಹಿಳಾ ಸಂಘ, ಕೆಂಪೇಗೌಡ ಯುವ ಸೇನೆ ಮತ್ತು ನೇಗಿಲ ಯೋಗಿ ಸೇವಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯುತ್ಸವ ಮತ್ತು ಒಕ್ಕಲಿಗರ ಹಬ್ಬದಲ್ಲಿ ಮಾತನಾಡಿದರು.
ಕೆಂಪೇಗೌಡರು ತಮ್ಮ ದೂರದೃಷ್ಟಿತ್ವದಿಂದ ಬೆಂಗಳೂರನ್ನು ನಿರ್ಮಿಸಿದ್ದರಿಂದ ಅವರು ಕೃಷ್ಣದೇವರಾಯರಿಗಿಂತಲೂ ಮಿಗಿಲಾಗಿದ್ದಾರೆ. ಅವರು ಸರ್ವ ಧರ್ಮದವರಿಗೂ ದುಡಿಮೆಗೆ ಸಮಾನ ಅವಕಾಶ ಕಲ್ಪಿಸಿದ್ದರಿಂದ ಅವರನ್ನು ಧರ್ಮಪ್ರಭು ಎಂದು ಕರೆಯಬಹುದಾಗಿದೆ. ಪ್ರತಿಯೊಂದು ವೃತ್ತಿಗೆಂದು ಒಂದೊಂದು ಪೇಟೆಯನ್ನು ನಿರ್ಮಿಸಿದ ಮಹಾನುಭಾವ. ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಿದ ಮಹತ್ವಪೂರ್ಣ ವ್ಯಕ್ತಿ ಎಂದರು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕನ್ನಡಿಗರಿಗಾಗಿ ಕಟ್ಟಿದ್ದ ಬೆಂಗಳೂರಿನಲ್ಲಿ ಇಂದು ಪರಕೀಯರ ಹಾವಳಿ ಹೆಚ್ಚಾಗಿದೆ. ಕನ್ನಡಿಗರೇ ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಬೆಂಗಳೂರಿನಲ್ಲಿ ಹೆಚ್ಚಾಗಿರುವ ಲ್ಯಾಂಡ್ ಮಾಫಿಯಾದ ಪರಿಣಾಮ ಕೆಂಪೇಗೌಡರು ನಿರ್ಮಿಸಿದ್ದ ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಮುಚ್ಚಿ ಬೃಹತ್ ಕಟ್ಟಡಗಳನ್ನು ಕಟ್ಟಿ ಸರ್ವ ನಾಶ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳೂ ಸಹ ಸೇರಿಕೊಂಡಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ಮೇಕೆದಾಟು ಯೋಜನೆ ಆರಂಭಿಸಿ:
ಜಿಲ್ಲೆಯ ಸುಮಾರು 26 ಲಕ್ಷ ಜನರ ಹೊಟ್ಟೆ ಮೇಲೆ ಹೊಡೆದು ಸರ್ಕಾರ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುತ್ತಿರುವುದು ಖಂಡನೀಯ. ಈಗಾಗಲೇ ಹಲವು ಹೋರಾಟಗಳನ್ನು ಮಾಡಲಾಗಿದೆ. ಈ ಯೋಜನೆಯನ್ನು ಸರ್ಕಾರ ಕೂಡಲೇ ರದ್ದು ಮಾಡಿ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಬೇಕು. ಈ ಯೋಜನೆಯಿಂದ ಬೆಂಗಳೂರು, ರಾಮನಗರ, ಮಾಗಡಿಗೆ ಕುಡಿಯುವ ನೀರು ಹರಿಸಬಹುದು ಎಂದು ಸರ್ಕಾರಕ್ಕೆ ತಿಳಿಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಕೆಂಪೇಗೌಡರ ಭಾವಚಿತ್ರವನ್ನು ವಿವಿಧ ಜಾನಪದ ತಂಡಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಾ.ಹ.ರಮಾಕುಮಾರಿ, ರಂಗಭೂಮಿ ಕ್ಷೇತ್ರದಿಂದ ದೇವಿಹಳ್ಳಿ ಮಂಜಣ್ಣ, ಸಮಾಜಸೇವೆಯಲ್ಲಿ ಬಾಣಸಂದ್ರದ ಬಿ.ಜಿ.ರವಿಕುಮಾರ್, ಕೃಷಿ ಕ್ಷೇತ್ರದಿಂದ ಕಡೇಹಳ್ಳಿಯ ಮುರಳೀಧರ್, ವೈದ್ಯಕೀಯ ಕ್ಷೇತ್ರದಿಂದ ಡಾ.ಶೇಖರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕೆಂಪೇಗೌಡ ಜಯಂತಿಯ ಅಂಗವಾಗಿ ನಡೆದ ಕಬ್ಬಡಿ, ಕೋಲಾಟ ಮತ್ತು ರಂಗನ ಕುಣಿತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಪಿ.ಎಚ್.ಧನಪಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎ.ಎನ್.ಕುಂ.ಇ.ಅಹಮದ್, ಬಿಇಒ ಸೋಮಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಬಡಗರಹಳ್ಳಿ ತ್ಯಾಗರಾಜ್, ನೇಗಿಲ ಯೋಗಿ ಸಂಘದ ತಾಲೂಕು ಅಧ್ಯಕ್ಷ ರಂಗನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನವೀನ್, ವಿ.ವಿ.ಶಾಲೆಯ ಮುಖ್ಯಸ್ಥೆ ವಿಜಯಲಕ್ಷ್ಮೀ, ತುಮುಲ್ ನಿರ್ದೇಶಕ ಮಹಾಲಿಂಗಯ್ಯ, ಮುಖಂಡರಾದ ರಮೇಶ್ ಗೌಡ, ಎಂ.ಡಿ.ಮೂರ್ತಿ, ಕೊಂಡಜ್ಜಿ ವಿಶ್ವನಾಥ್, ಆರ್.ಮಲ್ಲಿಕಾರ್ಜುನ್, ಹಾವಾಳ ರಾಮೇಗೌಡ, ಪ್ರವೀಣ್ ಗೌಡ, ಚೂಡಾಮಣಿ, ಶೃತಿ, ಎ.ಬಿ.ಜಗದೀಶ್, ಸಿದ್ದೇಗೌಡ, ಗಿರೀಶ್, ಕಾಂತರಾಜು, ಶ್ರೀನಿವಾಸ್, ಕೆಂಪೇಗೌಡ ಪಾತ್ರದಾರಿ ಶಂಕರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕರು ಸೇರಿ ಮುಖಂಡರು ಇದ್ದರು.