ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ವ ಜನಾಂಗವೂ ಒಗ್ಗಟ್ಟಿನಿಂದ ಸಹೋದರರಂತೆ ಬದುಕಲು ದಾರಿ ದೀಪವಾಗಿದ್ದ ಅಪ್ರತಿಮಾ ವೀರ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ತಾಪಂ ಆವರಣದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ನಡೆದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ, ದೂರ ದೃಷ್ಟಿಯ ಹರಿಕಾರ. ನಾಡಿಗೆ ಕೊಟ್ಟ ಕೊಡುಗೆಗಳು ವಿಶ್ವದ ಗಮನ ಸೆಳೆದಿವೆ. ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯದ ಜನರ ಅರ್ಥಿಕ ಮಟ್ಟವನ್ನು ಸುಧಾರಿಸಲು ಪೇಟೆಗಳನ್ನು ನಿರ್ಮಿಸಿದರು. ಜನ ಜಾನುವಾರುಗಳಿಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಮಾದರಿ ರಾಜರಾಗಿದ್ದರು ಎಂದು ಸ್ಮರಿಸಿದರು.
ತಹಸೀಲ್ದಾರ್ ಡಾ.ಎಸ್.ವಿ.ಲೊಕೇಶ್ ಮಾತನಾಡಿ, 16 ನೇ ಶತಮಾನದಲ್ಲಿ ಯಲಹಂಕದ ರಾಜವಂಶಸ್ಥರಾಗಿ ಜನಿಸಿ ರಾಜನಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅನಿಷ್ಟ ಪದ್ಧತಿ ಹೋಗಲಾಡಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.ಸರ್ವರನ್ನು ಒಳಗೊಂಡಂತೆ ಅಧಿಕಾರವನ್ನು ಮುನ್ನೆಸಿಕೊಂಡು ಬಂದಿದ್ದರು. ನಾಡು ಸಂಮೃದ್ಧಿಯೊಂದಿಗೆ ಜನರು ನೆಮ್ಮದಿಯಿಂದ ಬದುಕುವ ಆಶಯವನ್ನು ಹೊಂದಿ ಪ್ರತಿಯೊಂದು ಸಮುದಾಯವು ಅರ್ಥಿಕವಾಗಿ ಸದೃಢರಾಗಬೇಕೆಂಬ ಹಿನ್ನೆಲೆಯಲ್ಲಿ ಪೇಟೆಗಳನ್ನು ನಿರ್ಮಿಸಿ ವ್ಯಾಪರಕ್ಕೆ ಅನುವು ಮಾಡಿಕೊಟ್ಟು ಕಾರ್ಯತಂತ್ರ ರೂಪಿಸಿದ್ದರು ಎಂದು ಸ್ಮರಿಸಿದರು.
ಶಾಂತಿ ಕಾಲೇಜಿನ ಪ್ರಾಂಶುಪಾಲೆ ಅನಿತಾ ಕೆಂಪೇಗೌಡರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನಾ ತಾಪಂ ಕಚೇರಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನದವರೆಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಪ್ರತಿಷ್ಠಾಪಿಸಿದ ಬೆಳ್ಳಿ ರಥ ಮೆರವಣಿಗೆ ಜಾನಪದ ಕಲಾಮೇಳದೊಂದಿಗೆ ವಿಜೃಂಬಣೆಯಿಂದ ನಡೆಯಿತು.
ವೇದಿಕೆಯಲ್ಲಿ ತಾಪಂ ಇಒ ಶ್ರೀನಿವಾಸ್, ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಪುರಸಭೆ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಸಿದ್ದರಾಜು, ನೂರುಲ್ಲಾ, ಪ್ರಶಾಂತ್, ಬಸವರಾಜು, ಚಿಕ್ಕಲಿಂಗಯ್ಯ, ಮಾದೇಶ್, ನಾಗೇಶ್, ಬಸವರಾಜು, ಅಂಬರೀಷ್, ಚಿಕ್ಕರಾಜು, ಪ್ರಭುಲಿಂಗು, ಚೇತನ್ಕುಮಾರ್, ಚೌಡಪ್ಪ, ದೇವರಾಜು, ಕೆಂಪರಾಜು, ಮೂರ್ತಿ, ಸುಜಾತ ಕೆ.ಎಂಪುಟ್ಟು, ಸುಷ್ಮಾ ರಾಜು, ಸವಿತಾ, ಜಯರಾಜು ಸೇರಿದಂತೆ ಇತರರು ಇದ್ದರು.