ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿತಿತಿಮತಿಯ ಅರಣ್ಯ ಇಲಾಖೆಯ ವಸತಿಗೃಹದ ಆವರಣದಲ್ಲಿ ಅರಣ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ದಕ್ಷಿಣ ಕೊಡಗಿನ ಹಲವಾರು ಹೋಬಳಿಗಳ ರೈತ ಸಂಘದ ಸದಸ್ಯರು ಹಾಗೂ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಲಾಯಿತು.ವನ್ಯಜೀವಿ ವಿಭಾಗದಲ್ಲಿ ಕುಟಿಯಾಲ ಸೇತುವೆ, ಸೋಲಾರ್ ಬೇಲಿ ಅಳವಡಿಕೆ, ರೈಲ್ವೆ ಬ್ಯಾರಿಕೇಡ್, ಆನೆ ಮಾನವನ ಸಂಘರ್ಷ ಹಾಗೂ ಹುಲಿ, ಕಾಡುಕೋಣ ಮತ್ತು ಮಂಗಗಳ ದಾಳಿ, ತಿತಿಮತಿ ವಲಯದ ಜಂಗಲಾಡಿ ಬಳಿಯ 6 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಕಂಬಿ ಕಾಮಗಾರಿ ಹಾಗೂ ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ನಾಲ್ಕೇರಿ, ಚೂರಿಕಾಡ್, ಕಾನೂರು, ಚೈನ್ ಗೇಟ್, ಬಾಳೆಲೆ, ಕಾರ್ಮಾಡ್, ತಿತಿಮತಿ, ಚೆನ್ನಂಗಿ, ಕಿರುಗೂರು, ದೇವರಪುರ, ವಿರಾಜಪೇಟೆ, ಬಾಡಗ, ಕಣ್ಣಂಗಾಲ ಹಾಗೂ ಹೆಬ್ಬಾಲೆ ಈ ಭಾಗದ ರೈತರು ಆಗಮಿಸಿ ತಮ್ಮ ಸಮಸ್ಯೆಗಳನ್ನು ವನ್ಯಜೀವಿ ಅಧಿಕಾರಗಳ ಸಮ್ಮುಖದಲ್ಲಿ ವಿವರಿಸಲಾಯಿತು.*ಮತ್ತಿಗೋಡಿನಲ್ಲಿ ಆನೆ ಶಿಬಿರಇತ್ತೀಚೆಗೆ ಮತ್ತಿಗೋಡಿನಲ್ಲಿ ಆನೆ ಶಿಬಿರ ವೀಕ್ಷಿಸುವ ಸ್ಥಳವನ್ನು ನಿಗದಿ ಮಾಡಿದ್ದು, ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಕೊಡಗಿನಲ್ಲಿ ದುಬಾರೆ ಹಾಗೂ ನಾಗರಹೊಳೆಯಲ್ಲಿ ಆನೆ ಶಿಬಿರವಿದ್ದು, ಪುನಃ ಈಗ ತಿತಿಮತಿಯ ಮತ್ತಿಗೋಡಿನಲ್ಲಿ ಪ್ರಾರಂಭಿಸಿದ್ದು, ಹಲವು ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ರೈತ ಸಂಘದ ಪ್ರಮುಖರು ಆರೋಪಿಸಿದರು.ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿದ ಇದೇ ಸ್ಥಳದಲ್ಲಿ ಒಂದು ಸಾಕಾನೆ ಹಾಗೂ ಕಾಡುಕೋಣ ಸಾವಿಗೀಡಾಯಿತು. ಇದರಿಂದಲೇ 23 ರಸ್ತೆ ಹುಬ್ಬುಗಳನ್ನು ನಿರ್ಮಿಸಲಾಯಿತು. ಇದರಿಂದ ಆಸ್ಪತ್ರೆಗೆ ಸಾಗಿಸುವ ರೋಗಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಆನೆ ಶಿಬಿರ ವೀಕ್ಷಿಸುವ ಸ್ಥಳವನ್ನು ನಿರ್ಮಿಸುವುದರಿಂದ ವಾಹನದಟ್ಟಣೆ ಹೆಚ್ಚಾಗುವುದಿಲ್ಲವೇ?ಕೋಟಿಗಟ್ಟಲೆ ಹಣವನ್ನು ಇದಕ್ಕೆ ಖರ್ಚು ಮಾಡುವ ಬದಲು ರೈಲ್ವೆ ಕಂಬಿ ಅಳವಡಿಕೆ, ಕಂದಕ ನಿರ್ಮಾಣ ಹಾಗೂ ರೈತರಿಗೆ ಪರಿಹಾರ ನೀಡಬಹುದಲ್ಲವೇ? ಇದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸಭೆಯಲ್ಲಿ ಒಕ್ಕರುಳಿನಿಂದ ಆಗ್ರಹಿಸಲಾಯಿತು.