ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ನಾಗಸಮುದ್ರ ಗ್ರಾಮಸ್ಥರಿಂದ ಪ್ರತಿಭಟನೆ

| Published : Jun 30 2024, 12:49 AM IST

ಸಾರಾಂಶ

ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಗದಗ ತಾಲೂಕಿನ ತಾಲೂಕಿನ ನಾಗಸಮುದ್ರ ಗ್ರಾಮಸ್ಥರೊಂದಿಗೆ ವಿದ್ಯಾರ್ಥಿಗಳು ಸಾರಿಗೆ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಗದಗ: ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ನಾಗಸಮುದ್ರ ಗ್ರಾಮಸ್ಥರೊಂದಿಗೆ ವಿದ್ಯಾರ್ಥಿಗಳು ಸಾರಿಗೆ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಬಿಜೆಪಿ ಲಕ್ಕುಂಡಿ ಮಂಡಳದ ಅಧ್ಯಕ್ಷ ನಿಂಗಪ್ಪ ಮಣ್ಣೂರ ಮಾತನಾಡಿ, ಗದಗದಿಂದ ನಾಗರಾಳಕ್ಕೆ ಬಸ್ ಸಂಚಾರ ಮಾಡುತ್ತಿದ್ದು, ಈ ಮಧ್ಯೆ ಬರುವ ಬೆನಕನಕೊಪ್ಪ ಹಾಗೂ ನೀರಲಗಿ ಗ್ರಾಮಕ್ಕೆ ಬಸ್‌ ಬರುವಷ್ಟರಲ್ಲಿ ತುಂಬಿರುತ್ತದೆ. ನಾಗಸಮುದ್ರದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದು ಒಂದು ಕಡೆಯಾದರೆ ಗ್ರಾಮಸ್ಥರು ಗದಗ-ಬೆಟಗೇರಿ ಅವಳಿ ನಗರಕ್ಕೆ ಸಂಚಾರ ಮಾಡಲು ಕಷ್ಟಪಡಬೇಕಿದೆ. ಈ ಬಗ್ಗೆ ಗ್ರಾಮಸ್ಥರು ಸಾರಿಗೆ ಡಿಸಿಗೆ ಮನವಿ ಸಲ್ಲಿಸಿದರೂ ಈ ವರೆಗೂ ಯಾವುದೇ ಪ್ರತಿಕ್ರಿಯೆಯನ್ನು ಅಧಿಕಾರಿಗಳು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ (ಎಚ್. ಶಿವರಾಮೇಗೌಡ್ರ) ಬಣದ ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಮಾತನಾಡಿ, ಈ ಹಿಂದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಬೆಟಗೇರಿ ವಿಭಾಗದ ಸಾರಿಗೆ ಅಧಿಕಾರಿ ಸ್ಥಳಕ್ಕೆ ಆಗಮಿಸಿ, ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ, ಪ್ರತಿಭಟನೆ ನಡೆಸಿ ಹಲವು ದಿನ ಕಳೆದರೂ ಇದುವರೆಗೂ ಸಾರಿಗೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಸಮರ್ಪಕ ಬಸ್‌ ಸೌಲಭ್ಯ ಒದಗಿಸದೆ ಇದ್ದಲ್ಲಿ ಬೆಟಗೇರಿ ಮತ್ತು ಗದಗ ಡಿಪೋದಿಂದ ಸಂಚರಿಸುವ ಎಲ್ಲ ಬಸ್‌ಗಳನ್ನು ಗದಗ ಪಾಲಾ-ಪಾಲಾ ಬಾದಾಮಿ ರಸ್ತೆಯಲ್ಲಿ ತಡೆದು, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಹಿರಿಯರಾದ ಅಶೋಕ ವಡವಿ, ಮಲ್ಲನಗೌಡ ಬರಮಗೌಡ್ರ, ಗ್ರಾಪಂ ಸದಸ್ಯ ಬಸವನಗೌಡ ಪಾಟೀಲ, ನೀಲವ್ವ ಮಣ್ಣೂರ, ಮಲ್ಲನಗೌಡ ಪರ್ವತಗೌಡ್ರ, ಹನುಮಂತಪ್ಪ ಚವಡಿ, ಸುರೇಶ್ ಮುಳಗುಂದ, ಹುಸೇನಸಾಬ್ ನದಾಫ್‌, ಮಲ್ಲಪ್ಪ ಚವಡಿ, ಹೊಮನಗೌಡ ಮರಿಗೌಡ್ರ, ಯಲ್ಲಪ್ಪ ಅಣ್ಣಿಗೇರಿ, ದೇವಪ್ಪ ಕವಲೂರ, ಬಸವರಾಜ ಕುರವತ್ತಿ, ಬಸವರಾಜ ಕಟಗಿ ಹಾಗೂ ನೂರಾರು ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.