ನಾಗಶೆಟ್ಟಿಕೊಪ್ಪ ಕೆರೆ ನವೀಕರಣ: ಶಾಸಕರಿಂದ ಪರಿಶೀಲನೆ

| Published : Feb 19 2025, 12:51 AM IST

ಸಾರಾಂಶ

ಕೆರೆ ನವೀಕರಣ ಕಾಮಗಾರಿ, ಸ್ಥಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ, ಸಮರ್ಪಕವಾದ ಒಳಚರಂಡಿ

ಹುಬ್ಬಳ್ಳಿ: ಇಲ್ಲಿನ ನಾಗಶೆಟ್ಟಿಕೊಪ್ಪದ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕೆರೆ ನವೀಕರಣ ಕಾಮಗಾರಿ ಸ್ಥಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ನಗರಾಭಿವೃದ್ಧಿ ಇಲಾಖೆಯಿಂದ ₹2.50 ಕೋಟಿ ವೆಚ್ಚದಲ್ಲಿ ಕೆರೆ ನವೀಕರಣ ಕಾಮಗಾರಿ ಆರಂಭಿಸಿ 4 ವರ್ಷ ಕಳೆದರೂ ಶೇ. 10ರಷ್ಟು ಕಾಮಗಾರಿಯಾಗಿಲ್ಲ. ಆದರೆ, ಹಣ ಮಾತ್ರ ಖರ್ಚಾಗಿದೆ. ಕಾಮಗಾರಿ ಕೈಗೊಂಡಿರುವ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅವೈಜ್ಞಾನಿಕವಾಗಿ ಸಿದ್ಧಪಡಿಸಿದ ಡಿಪಿಆರ್ ಹಾಗೂ ಮಹಾನಗರ ಪಾಲಿಕೆ, ಹುಡಾ ಮತ್ತು ಗುತ್ತಿಗೆ ಪಡೆದವರಲ್ಲಿ ಪರಸ್ಪರ ಸಮನ್ವಯತೆ ಇಲ್ಲದಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಎಕರೆ ಸುತ್ತ ತಡೆಗೋಡೆ ನಿರ್ಮಿಸಲಾಗಿದೆ. ಸಮರ್ಪಕವಾದ ಒಳಚರಂಡಿ ಇಲ್ಲದ ಕಾರಣ ಮಲೀನ ನೀರು ಕೆರೆಗೆ ಹೋಗುತ್ತಿದೆ. ಅಕ್ಕಪಕ್ಕದ ಕೆಲ ಮನೆಯವರು ಶೌಚಾಲಯದ ಪೈಪ್ ಹರಿಬಿಟ್ಟಿದ್ದಾರೆ. ಈ ಕೆರೆ ನವೀಕರಣ ಯೋಜನೆ ಆರಂಭದಲ್ಲಿಯೇ ಒಳಚರಂಡಿ, ಗಟಾರ ನಿರ್ಮಾಣದ ಕುರಿತು ಸಮರ್ಪಕವಾಗಿ ಯೋಜನೆ ರೂಪಿಸಬೇಕಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ, ಹಣ ಪೋಲಾಗಿದೆ ಎಂದು ಶಾಸಕರ ಬಳಿ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.

ಈ ವೇಳೆ ಮಾತನಾಡಿದ ಶಾಸಕರು, ಈ ಕಾಮಗಾರಿ ಕುರಿತು ಸೋಮವಾರ ಹುಡಾ ಮತ್ತು ಕೆಆರ್‌ಡಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ತಮ್ಮಷ್ಟಕ್ಕೆ ತಾವೇ ಡಿಪಿಆರ್ ಸಿದ್ಧಪಡಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಒಳಚರಂಡಿ ಸಮಸ್ಯೆಗೆ ಪರಿಹಾರ ಸಿಕ್ಕರೆ ಮಾತ್ರ ಈ ಯೋಜನೆ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.

ಇಲ್ಲಿ ಒಳಚರಂಡಿ ಕಾಮಗಾರಿಯನ್ನು ಮಹಾನಗರ ಪಾಲಿಕೆ ಕೈಗೊಂಡಿದ್ದು, ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಕೆರೆ ಅಭಿವೃದ್ಧಿಗೆ ಸಂಬಂಧಿಸಿ ₹57 ಲಕ್ಷದ ಕಾಮಗಾರಿ ಬಾಕಿಯಿದ್ದು, ನಂತರ ಅದನ್ನು ಕೈಗೆತ್ತಿಕೊಳ್ಳಲಾಗುವುದು. ಒಂದುವಾರ ಬಿಟ್ಟು ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ತಿಳಿಸಿದರು.

ಈ ವೇಳೆ ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಪ್ರಕಾಶ ಕುರಹಟ್ಟಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಪಾಲಿಕೆ ಸಹಾಯಕ ಅಭಿಯಂತರ ವೆಂಕಟೇಶ ದಂಡಗಿ, ರವಿ ನಾಯ್ಕ ಸೇರಿದಂತೆ ಸ್ಥಳಿಯರು ಪಾಲ್ಗೊಂಡಿದ್ದರು.