ನಾಗೇಂದ್ರಗೆ ಕೈಯಲ್ಲಿ ಸಂವಿಧಾನ ಬುಕ್ ಹಿಡಿದುಕೊಂಡು, ದಲಿತರ ಬಗ್ಗೆ, ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಮೂರು ಬಿಟ್ಟವರು ಮಾತ್ರ ಮಂತ್ರಿ ಆಗುತ್ತಾರೆ. ಆದರೆ, ನಾಗೇಂದ್ರ ಆರು ಬಿಟ್ವವನು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಏಕ ವಚನದಲ್ಲೇ ವಾಗ್ದಾಳಿ ಮಾಡಿದರು.
ಬಳ್ಳಾರಿ: ನಾಗೇಂದ್ರಗೆ ಕೈಯಲ್ಲಿ ಸಂವಿಧಾನ ಬುಕ್ ಹಿಡಿದುಕೊಂಡು, ದಲಿತರ ಬಗ್ಗೆ, ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಮೂರು ಬಿಟ್ಟವರು ಮಾತ್ರ ಮಂತ್ರಿ ಆಗುತ್ತಾರೆ. ಆದರೆ, ನಾಗೇಂದ್ರ ಆರು ಬಿಟ್ವವನು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಏಕ ವಚನದಲ್ಲೇ ವಾಗ್ದಾಳಿ ಮಾಡಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿಯಿಂದ ನಡೆಯುತ್ತಿರುವ ಮೂರನೇ ದಿನದ ಧರಣಿಯಲ್ಲಿ ಮಾತನಾಡಿದರು.ದಲಿತರ ಹೆಸರು ಹೇಳಿ ಭ್ರಷ್ಟಾಚಾರ ಮಾಡಿದ ಸಚಿವ ನಾಗೇಂದ್ರಗೆ ಸಂವಿಧಾನದ ಪುಸ್ತಕ ಹಿಡಿಯಲು ನೈತಿಕತೆ ಇಲ್ಲ. ಈಗ ದಲಿತರ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ನಾಗೇಂದ್ರಗೆ ಮನುಷ್ಯತ್ವ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಸದನದೊಳಗೆ ಮತ್ತು ಹೊರಗೆ ಬಿಜೆಪಿಯಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಭ್ರಷ್ಟ ಮಂತ್ರಿ ಇರುವ ವರೆಗೂ ಸದನ ನಡೆಯಲು ಬಿಡಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಾಗೇಂದ್ರ ನನ್ನ ಮೇಲೆ 26 ಎಕರೆ ಜಮೀನಿನ ಕಬಳಿಕೆ ಆರೋಪ ಮಾಡಿದ್ದಾರೆ. ನಾನು ಎಲ್ಲೂ ಓಡಿ ಹೋಗಲ್ಲ. ಜನರ ಮುಂದೆ ಎಲ್ಲ ದಾಖಲೆ ಇಡುವೆ. ರಾಮುಲು ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ. ಜನರಿಗೆ ರಾಮುಲು ಅಂದರೆ ಪ್ರಾಮಾಣಿಕ ವ್ಯಕ್ತಿ ಎನ್ನುವುದು ಗೊತ್ತಿದೆ. ಲೋಕಾಯುಕ್ತ ತನಿಖೆ ಆಗಿದೆ. ಪ್ರೈವೇಟ್ ಕೇಸ್ ಕೂಡ ಇದೆ. ಎಲ್ಲದಕ್ಕೂ ಉತ್ತರ ಕೊಡುವೆ ಎಂದರು.ಯಡಿಯೂರಪ್ಪ, ಶಿವಕುಮಾರ್ ಅವರು ವ್ಯಾವಹರಿಕವಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಬೇರೆ ಬೇರೆ ಕಾರಣಕ್ಕೆ ಜಾಮೀನಿನ ಮೇಲೆ ಹೊರಗಡೆ ಇರಬಹುದು. ಅವರು ಎಲ್ಲೂ ಸರಕಾರದ ಹಣ ಹೊಡೆದಿರುವ ಉದಾಹರಣೆ ಇಲ್ಲ. ಸ್ವಾತಂತ್ರ್ಯ ಬಂದ ಮೇಲೆ ದಲಿತರ ಹಣ ಹೊಡೆದ ದೇಶದ ಮೊದಲ ವ್ಯಕ್ತಿ ನಾಗೇಂದ್ರ. ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಬಿಕೆ ಹರಿಪ್ರಾದ್ ಸೋನಿಯಾಗಾಂಧಿ ಗುಲಾಮರಾಗಿ ವಂದೇಮಾತರಂ ಗೀತೆ ಹಾಡಲ್ಲ ಅಂತಿದ್ದಾನೆ. ಅವನು ದೇಶಕ್ಕೆ ನಿಷ್ಠನಾಗಿದ್ದರೆ ವಂದೆಮಾತರಂ ಹಾಡುತ್ತಿದ್ದ. ಸೋನಿಯಾ ಗಾಂಧಿ ಗುಲಾಮನಾಗಿ ವಂದೇ ಮಾತರಂ ಹಾಡಲ್ಲ ಅಂತಿದ್ದಾನೆ ಎಂದರು.ಮೊದಲ ಹಂತದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಪಾದಯಾತ್ರೆ ಬಗ್ಗೆ ಮುಂದೆ ಚಿಂತನೆ ಮಾಡುತ್ತಾರೆ. ನಮ್ಮ ಅಧ್ಯಕ್ಷರಿಗೆ ಪಾದಯಾತ್ರೆಗೆ ಆಸಕ್ತಿ ಇದೆ. ಮುಂದೆ ಏನು ಮಾಡಬೇಕು ಎಂಬುದನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ: ನಾಗೇಂದ್ರ ಬಗ್ಗೆ ಸಿಎಂ ಅವರಿಗೆ ಭಯವಿದೆ. ರಾಹುಲ್ ಗಾಂಧಿ ಹೆಸರು ಹೊರ ಬರುತ್ತೋ, ಕೆಸಿ ವೇಣುಗೊಪಾಲ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರು ಬರತ್ತದೋ ಎನ್ನುವ ಭಯ ಸಿಎಂಗೆ ಕಾಡುತ್ತಿದೆ. ಹೀಗಾಗಿ, ಡಿಕೆಶಿ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ನಾಗೇಂದ್ರ ಪಿಎ ರೆಡ್ಡಿ ಡಿಜಿಟಲ್ ಸಹಿ ಇದೆ. ಯಾರು ಯಾರು ಎಷ್ಟೆಷ್ಟು ಕೊಟ್ಟಿದ್ದಾರೆಂದು ಬರೆದಿದ್ದಾರೆ. ಕಂಪ್ಲಿ ಶಾಸಕ ಗಣೇಶ್, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಕೂಡ್ಲಿಗಿ ಶ್ರೀನಿವಾಸ್ ಹೆಸರು ಸಹ ಬರೆದಿದ್ದಾನೆ ಎಂದು ಆರೋಪಿಸಿದರು.ಹೊಸಪೇಟೆಯಲ್ಲಿ 3ನೇ ದಿನಕ್ಕೆ ಕಾಲಿಟ್ಟ ಧರಣಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಹಿಳಾ ಮೋರ್ಚಾ ಕಾರ್ಯಕರ್ತರು ಕ್ರಾಂತಿಗೀತೆ ಹಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮೀರಾಬಾಯಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನವಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣವೂ ಸರಿಯಾಗಿ ತಲುಪುತ್ತಿಲ್ಲ. ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಿಂದ ಸಾವಿರಾರು ಮಹಿಳೆಯರನ್ನು ಕರೆತಂದು ಬೃಹತ್ ಕ್ರಾಂತಿಕಾರಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಅಲ್ಪಸಂಖ್ಯಾತ ಮೋರ್ಚಾದ ಮಂಜುನಾಥ್ ಜೈನ್ ಮಾತನಾಡಿ, ಭ್ರಷ್ಟಾಚಾರದ ಆರೋಪ ಹೊತ್ತವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ. ತಕ್ಷಣವೇ ಅವರನ್ನು ವಜಾಗೊಳಿಸದಿದ್ದರೆ ಜಿಲ್ಲೆಯಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ಮುಖಂಡರಾದ ಕೆ.ಎಸ್.ರಾಘವೇಂದ್ರ, ಶಂಕರ್ ಮೇಟಿ, ಜಗದೀಶ್ ಕಮಟಗಿ, ರೇವಣ್ಣ, ಅರ್ಪಿತಾ ಗೌಡ, ಗೀತಾ, ನಿರ್ಮಲಾ, ಶ್ರುತಿ, ಜ್ಯೋತಿ, ಸೌಮ್ಯಾ, ರೇಣುಕಾ, ಉಮಾದೇವಿ, ಪೂರ್ಣಿಮಾ, ವಿಜಯಲಕ್ಷ್ಮೀ, ಲಲಿತಾ, ಜಯಶ್ರೀ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.