ಅದರಗುಂಚಿ ಕೆಪಿಎಸ್ ಶಾಲೆ ಆರಂಭಿಸಿ ಬುಡರಶಿಂಗಿ ಶಾಲೆಯನ್ನು ಅದಕ್ಕೆ ವಿಲೀನ ಮಾಡಲಾಗುತ್ತಿದೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎನ್ನುವ ಹೆಸರಿನಲ್ಲಿ ಸರ್ಕಾರವು ಕೆಪಿಎಸ್ ಶಾಲೆಗಳನ್ನು ಆರಂಭಿಸಿದೆ.
ಹುಬ್ಬಳ್ಳಿ:
ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಯೋಜನೆ ಹೆಸರಲ್ಲಿ ಮುಚ್ಚಲಾಗುತ್ತಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು, ಯುವಕರು ಹಾಗೂ ವಿದ್ಯಾರ್ಥಿಗಳು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಶರಣಬಸವ ಗೋನವಾರ ಮಾತನಾಡಿ, ಅದರಗುಂಚಿ ಕೆಪಿಎಸ್ ಶಾಲೆ ಆರಂಭಿಸಿ ಬುಡರಶಿಂಗಿ ಶಾಲೆಯನ್ನು ಅದಕ್ಕೆ ವಿಲೀನ ಮಾಡಲಾಗುತ್ತಿದೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎನ್ನುವ ಹೆಸರಿನಲ್ಲಿ ಸರ್ಕಾರವು ಕೆಪಿಎಸ್ ಶಾಲೆಗಳನ್ನು ಆರಂಭಿಸಿದೆ. ಆದರೆ, ಹಳ್ಳಿಯ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವುದೇ ಸರ್ಕಾರದ ನಿಜವಾದ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷೆ ಗಂಗಾ ಹುಕ್ಕಿನಕೇರಿ ಮಾತನಾಡಿ, ನಮ್ಮ ಊರಲ್ಲಿ ಒಂದೇ ಶಾಲೆ ಇರುವುದು. ಇದನ್ನೂ ಮುಚ್ಚಿದರೆ ನಮ್ಮ ಮಕ್ಕಳನ್ನು ಅದರಗುಂಚಿ ಶಾಲೆಗೆ ಕಳುಹಿಸಬೇಕು. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವ ಪರಿಸ್ಥಿತಿ ಇದೆ. ಯಾವುದೇ ಕಾರಣಕ್ಕೂ ನಮ್ಮ ಜೀವ ಹೋದರು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆ ಬಳಿಕ ಊರಿನ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಸರ್ಕಾರದ ಕಾಯ್ದೆ ವಾಪಸ್ ಆಗುವ ವರೆಗೂ ಹೋರಾಟ ನಡೆಸುವ ಕುರಿತು ಗ್ರಾಮಸ್ಥರು ನಿರ್ಧಾರ ಕೈಗೊಂಡರು.
ಈ ವೇಳೆ ಮುಲ್ಲಾಸಾಬ್ ಸೈದನ್ನವರ, ಹೀನಾ ಕೌಸರ್ ಸೈದನ್ನವರ, ಅಂಜುಮಾ ಮುಂದಿನಮನಿ, ಶೇಖಪ್ಪ ಜಗಳೂರ, ಸುಭಾಸ್ ಜಗಳೂರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.