ಸಾರಾಂಶ
ಸಾಂಪ್ರದಾಯಿಕವಾಗಿ ಸರಳತೆಯಿಂದ ಧರ್ಮವನ್ನು ಆಚರಣೆ ಮಾಡಬೇಕೆಂದು ಪವಾಡ ಪುರುಷ ಗುರುಮಲ್ಲೇಶ್ವರರು ಅಂದಿನ ಕಾಲದಲ್ಲಿಯೇ ತಿಳಿಸಿಕೊಟ್ಟವರು
ಕನ್ನಡಪ್ರಭ ವಾರ್ತೆ ಮಲ್ಕುಂಡಿ
ದಾಸೋಹ ಕಾಯಕ ಮನುಷ್ಯನನ್ನು ಮೋಕ್ಷದ ಹಾದಿಗೆ ಕೊಂಡ್ಯೊಯಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ಸಮೀಪದ ಹಲ್ಲರೆ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ನಂದಿ ದ್ವಜಾ ಲೋಕಾರ್ಪಣೆ ಹಾಗೂ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸೃಷ್ಟಿಯಲ್ಲಿ ಹೊಸತ್ತನ್ನು ಸೃಷ್ಟಿಸುವ ಯಾರಿಗೂ ಇಲ್ಲ ಪ್ರಕೃತಿದತ್ತವಾಗಿರುವುದನ್ನು ಮರು ಸ್ಥಾಪಿಸುವುದು ಸಾಧ್ಯವಿದೆ ಎಂದರು.
ಸಾಂಪ್ರದಾಯಿಕವಾಗಿ ಸರಳತೆಯಿಂದ ಧರ್ಮವನ್ನು ಆಚರಣೆ ಮಾಡಬೇಕೆಂದು ಪವಾಡ ಪುರುಷ ಗುರುಮಲ್ಲೇಶ್ವರರು ಅಂದಿನ ಕಾಲದಲ್ಲಿಯೇ ತಿಳಿಸಿಕೊಟ್ಟವರು. ಅವರ ಹೆಸರಲ್ಲಿ ದಾಸೋಹ ಕಾಯಕವನ್ನು ಮಠಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ಹೇಳಿದರು.ಸಂಸದ ಸುನಿಲ್ ಬೋಸ್ ಮಾತನಾಡಿ, ಮಠ ಕಟ್ಟಿ ದಾಸೋಹ ಕಾರ್ಯವು ನಿತ್ಯವೂ ನಿರ್ವಹಿಸುವುದು ನಿಜಕ್ಕೂ ಸಾವಲಿನ ಕಾರ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶ್ರೀ ಗುರುಮಲ್ಲೇಶ್ವರ ಹೆಸರಿನಲ್ಲಿ ಮಠ ಕಟ್ಟಿ ಜೀರ್ಣೋದ್ಧಾರಗೊಳಿಸಿರುವ ಬಸವಣ್ಣ ಸ್ವಾಮೀಜಿಯವರ ಶ್ರಮ ಮೆಚ್ಚುವಂತಹದ್ದು. ಭಕ್ತರನ್ನು ಒಗ್ಗೂಡಿಸಿ ದಾಸೋಹ ಕಾರ್ಯ ನಡೆಸುತ್ತಿರುವುದು ಮಠ ಮಾನ್ಯಗಳ ಹಿರಿಮೆ ಹೆಚ್ಚಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ದೇವನೂರು ಗುರುಮಲ್ಲೇಶ್ವರ ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಮುರುಘ ರಾಜೇಂದ್ರ ವಿರಕ್ತ ಮಠಾಧ್ಯಕ್ಷ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತ ಮಠಾಧ್ಯಕ್ಷ ಶ್ರೀ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಹಲ್ಲರೆ ಗುರುಮಲ್ಲೇಶ್ವರ ಮಠಾಧ್ಯಕ್ಷ ಶ್ರೀ ಬಸವಣ್ಣ ಸ್ವಾಮೀಜಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಜಿ. ಮಹೇಶ್, ಮುಖಂಡರಾದ ಇಂಧನ್ ಬಾಬು, ಎಸ್.ಎಂ. ಕೆಂಪಣ್ಣ, ಮಹದೇವಪ್ಪ ಮೊದಲಾದವರು ಇದ್ದರು.