ಗೌರಿ ಗಣೇಶೋತ್ಸವದ ಅಂಗವಾಗಿ ಸ್ಥಳಿಯ ಗ್ರಾಮದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ನಾಪೋಕ್ಲು: ಗೌರಿ ಗಣೇಶೋತ್ಸವದ ಅಂಗವಾಗಿ ಸ್ಥಳಿಯ ಗ್ರಾಮದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಗೌರಿ ಗಣೇಶೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಐದು ಸೇವಾಸಮಿತಿಗಳ ವತಿಯಿಂದ ತಯಾರಿ ನಡೆಸಿದ್ದು ಸೋಮವಾರ ಸಂತೆ ಮೈದಾನದಿಂದ ಅಲಂಕೃತ ವಾಹನಗಳಲ್ಲಿ ಗೌರಿ ಗಣೇಶಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಯಿತು.ಇಲ್ಲಿನ ಮಾರುಕಟ್ಟೆ ಬಳಿ ಮೆರವಣಿಗೆಯನ್ನು ಉದ್ಘಾಟಿಸಿದ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಕಲಿಯಂಡ ವಿಠಲ ಮಾತನಾಡಿ, ಬಾಲಗಂಗಾಧರ ತಿಲಕ್ ಅವರ ಮುಂದಾಳತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಭಾರತೀಯರನ್ನು ಒಂದುಗೂಡಿಸಲು ಗಣೇಶ ಚತುರ್ಥಿಯನ್ನು ಮುಂಬೈನಲ್ಲಿ ಆರಂಭಿಸಲಾಯಿತು. ಇದು ಸರ್ವರನ್ನು ಒಂದುಗೂಡಿಸುವ ಸಾಮರಸ್ಯದ ಹಬ್ಬ. 33 ವರ್ಷಗಳಿಂದ ಇಲ್ಲಿ ಐದು ಸೇವಾಸಮಿತಿಗಳ ಮುಂದಾಳತ್ವದಲ್ಲಿ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮವನ್ನು ಜಾಗೃತಗೊಳಿಸಲು ಬಾಲಗಂಗಾಧರ ತಿಲಕ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ಇಲ್ಲಿನ ಇಂದಿರಾನಗರದ ವಿವೇಕಾನಂದ ಸೇವಾಸಮಿತಿ ವತಿಯಿಂದ ಗಣೇಶಮೂರ್ತಿಗಳನ್ನು ಇಂದಿರಾನಗರದಲ್ಲಿ ಪ್ರತಿಷ್ಠಾಪಿಸಲಾಯಿತು . ಶ್ರೀರಾಮ ಟ್ರಸ್ಟ್ ವತಿಯಿಂದ ಗುರುಪೊನ್ನಪ್ಪ ಸಭಾಂಗಣದಲ್ಲಿ, ಪೊನ್ನುಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ ವತಿಯಿಂದ ಹಳೆ ತಾಲೂಕು ಪೊನ್ನುಮುತ್ತಪ್ಪ ದೇವಾಲಯದಲ್ಲಿ, ನಾಪೋಕ್ಲುನಾಡು ಗೌರಿಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿದೇವಾಲಯದಲ್ಲಿ , ಕಕ್ಕುಂದಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಗಣೇಶಮೂರ್ತಿಯನ್ನು ಅದ್ದೂರಿಯಿಂದ ಪ್ರತಿಷ್ಠಾಪಿಸಲಾಯಿತು. ಬಳಿಕ ಎಲ್ಲಾ ಕಡೆಯಲ್ಲೂ ವಿಶೇಷ ಪೂಜೆ, ತೀರ್ಥ ಪ್ರಸಾದ ವಿತರಣೆ ಜರುಗಿತು.ಗೌರಿಗಣೇಶ ಮೂರ್ತಿಗಳ ಮೆರವಣಿಗೆ, ಪ್ರತಿಷ್ಠಾಪನೆ ಸಂದರ್ಭ ವಿವಿಧ ಸೇವಾಸಮಿತಿಗಳ ಪದಾಧಿಕಾರಿಗಳು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ವಾಹನಗಳ ಅದ್ದೂರಿ ಮೆರವಣಿಗೆ ನಡೆಯಿತು. ಈ ಸಂದರ್ಭ ಇಂದಿರಾ ನಗರದ ವಿವೇಕಾನಂದ ಸಂಘದ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಗೋಣಿಕೊಪ್ಪ ಸೂರತ್ ಭಜನಾ ಮಂಡಳಿಯ ಮಕ್ಕಳ ಭಜನಾ ಕುಣಿತ ಮೂಡಿಬಂತು.
18ರಂದು ಶೋಭಾಯಾತ್ರೆ: 18ರಂದು ಮಧ್ಯಾಹ್ನ ಹೂವಿನ ಅಲಂಕೃತ ಭವ್ಯ ಮಂಟಪದಲ್ಲಿ ಸೌಂಡ್ಸ್ ಮತ್ತು ವಿದ್ಯುತ್ ದೀಪ , ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳೊಂದಿಗೆ ನಾಪೋಕ್ಲು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆದು ಪವಿತ್ರ ಕಾವೇರಿ ನದಿಯಲ್ಲಿ ರಾತ್ರಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು.