ನಾಪೋಕ್ಲು: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಐತಿಹಾಸಿಕ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವರ ವಾರ್ಷಿಕ ಉತ್ಸವ ಶನಿವಾರ ಸಾಂಪ್ರದಾಯಿಕವಾಗಿ ವಿಜೃಂಭಣೆಯಿ೦ದ ಸಂಪನ್ನಗೊಂಡಿತು.

ವಿವಿಧ ಆರಾಧನಾ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಉಮಾಮಹೇಶ್ವರಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಶುಕ್ರವಾರ ಪಟ್ಟಣಿ ಹಬ್ಬದ ವಿಶೇಷ ಪೂಜಾ ಕರ್ಯಗಳು ಜರುಗಿ ದೇವರ ದರ್ಶನ ಅನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಭಕ್ತಾದಿಗಳಿಗೆ ಅನ್ನದಾನ ನಂತರ ಎತ್ತು ಕಾಡು ಹೊಳೆಯಲ್ಲಿ ಭಗವತಿ ದೇವರ ಅವಭೃತಸ್ನಾನ, ಆ ಬಳಿಕ ಚೆಂಡೆ ಮೇಲಗಳೊಂದಿಗೆ ದೇವಾಲಯಕ್ಕೆ ಹಿಂತಿರುಗಿ ನೃತ್ಯೋತ್ಸವದೊಂದಿಗೆ ಹಬ್ಬವು ಸಂಪನ್ನ ಗೊಂಡಿತು.ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಮುಖ್ಯ ಅರ್ಚಕ, ತಂತ್ರಿ, ರಮೇಶ್ ಭಟ್, ಸುರೇಶ್ ಹಾಗೂ ಕುಟುಂಬದ ಸದಸ್ಯರು ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ (ಪುಂಡ) ನೆರವೇರಿಸಿ ಕೊಟ್ಟರು. ಶನಿವಾರ ಶುದ್ಧ ಕಳಶದೊಂದಿಗೆ ವಾರ್ಷಿಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚೀರ ರಮ್ಮಿ ನಾಣಯ್ಯ, ಕಾರ್ಯದರ್ಶಿ ಪುಲ್ಲೇರ ವಿಠಲ. ಸದಸ್ಯರು. ದೇವಾಲಯದ ದೇವತಕ್ಕರಾದದ ವಾಂಜಂಡ ಬೋಪಯ್ಯ ಸೇರಿದಂತೆ ಇತರ ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದು. ಊರು ಪರ ಊರಿನ ಭಕ್ತಾದಿಗರು ಶ್ರದ್ಧಾ ಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿ ತೀರ್ಥಪ್ರಸಾದ ಸ್ವೀಕರಿಸಿಕೊಂಡರು.