ನಿಜಾಚರಣೆಯಿಂದ ಲಿಂಗಾಯತರಾಗಲು ಸಾಧ್ಯ

| Published : Jan 29 2024, 01:30 AM IST

ಸಾರಾಂಶ

ಇಂದು ಲಿಂಗಾಯತ ಸ್ವಾಮಿಗಳು, ಅಧಿಕಾರಿಗಳು ಹಾಗೂ ಸಾಹಿತಿಗಳಿಂದ ಲಿಂಗಾಯತ ನಿಜಾಚರಣೆ ದೂರವಾಗುತ್ತಿರುವುದು ಆತಂಕದ ವಿಷಯ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಟ್ಟಿನಿಂದ ಯಾರೂ ಲಿಂಗಾಯತರಾಗಲು ಸಾಧ್ಯವಿಲ್ಲ. ಆದರೆ, ಲಿಂಗಾಯತ ನಿಜಾಚರಣೆಗಳ ಅನುಷ್ಠಾನದಿಂದ ಯಾರು ಬೇಕಾದರೂ ಲಿಂಗಾಯತರಾಗಲು ಸಾಧ್ಯ ಎಂದು ತರಳಬಾಳು ಜಗದ್ಗುರು ಶಾಖಾ ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ನಾಗನೂರು ರುದ್ರಾಕ್ಷಿ ಮಠದ ಆರ್‌.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶದ ತೃತೀಯ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಲಿಂಗಾಯತ ಸ್ವಾಮಿಗಳು, ಅಧಿಕಾರಿಗಳು ಹಾಗೂ ಸಾಹಿತಿಗಳಿಂದ ಲಿಂಗಾಯತ ನಿಜಾಚರಣೆ ದೂರವಾಗುತ್ತಿರುವುದು ಆತಂಕದ ವಿಷಯ ಎಂದರು.

ನಮ್ಮ ನಡೆ, ನುಡಿ ಬೇರೆ ಬೇರೆ ಇರಬಾರದು. ಇವುಗಳಲ್ಲಿ ಸಾಮ್ಯತೆ ಇರಬೇಕು. ಮಹಿಳೆಯರು ಲಿಂಗಾಯತ ಧರ್ಮದ ವಾರಸುದಾರರಿದ್ದಂತೆ ಅವರು ದೇವರ ಬಗೆಗಿನ ಭಯದಿಂದ ಹೊರಬರಬೇಕು. ಲಿಂಗಾಯತ ಎನ್ನುವುದು ಮೌಢ್ಯಮುಕ್ತವಾದ ವೈಜ್ಞಾನಿಕ ತಳಹದಿಯ ಮೇಲೆ ರೂಪಗೊಂಡ ಆಚಾರ, ವಿಚಾರಗಳ ಸಂಗಮ ಎಂದರು.

ಲಿಂಗಾಯತ ನಿಜಾಚರಣೆ ಅನುಷ್ಠಾನಗೊಳಿಸುವಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರು, ಕಲ್ಲು, ಮಣ್ಣು, ಮರಗಳಲ್ಲಿ ಭಗವಂತನಿಲ್ಲ. ನಮ್ಮನ್ನು ನಾವು ಅರಿತರೆ ನಾವೇ ಭಗವಂತನ ಸ್ವರೂಪದವರಾಗುತ್ತೇವೆ. ಏಕದೇವೋಪಾಸನೆಗೆ ಮಹಿಳೆಯರು ಆದ್ಯತೆ ನೀಡುತ್ತ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ಮಹಿಳೆಯರು ಇಂದು ಜಗದ್ಗುರುಗಳಾಗುತ್ತಿರುವುದು ಲಿಂಗಾಯತ ನಿಜಾಚರಣೆಯ ಅನುಷ್ಠಾನದಿಂದ ಇದು ಎಲ್ಲ ಮಹಿಳೆಯರೂ ಹೆಮ್ಮೆ ಪಡುವ ವಿಷಯ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಕ್ಕ ಸಿದ್ರಾಮಣ್ಣ ನಡಕಟ್ಟಿ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆ ನೆಮ್ಮದಿಗಾಗಿ ಭಗವಂತನ ಮೊರೆ ಹೋಗುತ್ತಾರೆಯೆ ವಿನಃ ಸ್ವಾರ್ಥಕ್ಕಾಗಿ ಅಲ್ಲ. ಜಾನಪದ ಕವಿ ಹೇಳುವಂತೆ ಮಹಿಳೆಯರು ಮಲ್ಲಿಗೆ ಹೂ ಇರುವಾಗ ಮುಳ್ಳನ್ನು ಮುಡಿಯಬಾರದು ಹಾಗೆಯೇ ಕಲ್ಯಾಣದ ಬಸವಣ್ಣನಿರುವಾಗ ಕಲ್ಲು ದೇವರಿಗೆ ಕೈ ಮುಗಿಯಬಾರದು ಎಂದರು.

ತೃತೀಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಲ್ಲಾಪುರ ಮುಗಳಿ ಬಸವಮಂಟಪದ ಮಹಾನಂದಾ ತಾಯಿ ಅವರು, ಮಹಿಳೆಯರು ಸರಳತೆ, ಸೌಜನ್ಯ ಹಾಗು ಹೃದಯವಂತಿಕೆ ಅಳವಡಿಸಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಈ ವೇಳೆ ದಾಕ್ಷಾಯಿಣಿ ಕೋಳಿವಾಡ, ರಾಜೇಶ್ವರಿ ಶಿವಾನಂದ, ಕಲ್ಪನಾ ಉಮೇಶ, ಸರೋಜ ನಂದರಗಿ, ನಂದಿನಿ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರಾರಂಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮಿ ಪುಟ್ಟಿ ಸ್ವಾಗತಿಸಿದರು. ಸಂಗೀತ ಕುಂಬಾರ ವಂದಿಸಿದರು. ಮೇಘಾ ಪಾಟೀಲ ನಿರೂಪಿಸಿದರು.

ಬಾಕ್ಸ್:

ಸಾಮೂಹಿಕ ಇಷ್ಟಲಿಂಗ ಪೂಜೆ :

ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಆವರಣ ಆರ್‌.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಮಾವೇಶದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಸಾವಿರಾರು ಶರಣೆಯರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಯನ್ನು ತೋರಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶರಣ ಶರಣೆಯರು ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಸಂಕಲ್ಪ ತೊಟ್ಟು, ವಿಶ್ವದ ಕಲ್ಯಾಣಕ್ಕೆ ಪ್ರಾರ್ಥಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ಪೂಜೆಯಲ್ಲಿ ಸಂಚಾರಿ ಗುರು ಬಸವ ಬಳಗದ ಮಹಾಂತೇಶ ತೋರಣಗಟ್ಟಿ, ಪ್ರೇಮಾ ಅಂಗಡಿ, ಬಸವರಾಜ ರೊಟ್ಟಿ, ಅಶೋಕ ಮಳಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರುರ ವಂದಿಸಿದರು. ಮೇಘಾ ಪಾಟೀಲ ನಿರೂಪಿಸಿದರು.