ಮಹದೇಶ್ವರ, ಮಂಟೇಸ್ವಾಮಿ ಕಾವ್ಯ ಅನುವಾದವಾಗಲಿ

| Published : Aug 25 2024, 01:49 AM IST

ಸಾರಾಂಶ

ಮಹದೇಶ್ವರ ಮತ್ತು ಮಂಟೇಸ್ವಾಮಿ ಕಥಾ ಪ್ರಸಂಗಗಳನ್ನು ಇಂಗ್ಲಿಷ್ ಮತ್ತು ಹಿಂದಿಗೆ ಅನುವಾದಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರುಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಅನುವಾದಕ್ಕೆ ಸರ್ಕಾರ ವಿದ್ವಾಂಸರ ತಂಡ ರಚಿಸಬೇಕು ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್ ಮೆಂಟ್, ಕರ್ನಾಟಕ ಜಾನಪದ ಅಕಾಡೆಮಿ, ಮೈಸೂರು ವಿವಿ ಸಮಾಜ ಕಾರ್ಯ ವಿಭಾಗ, ಆಕಾಶವಾಣಿ ಸಹಯೋಗದಲ್ಲಿ ವಿಜ್ಞಾನ ಭವನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪರಂಜ್ಯೋತಿ ಮಂಟೇಸ್ವಾಮಿ ಒಂದು ಮರುದರ್ಶನ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹದೇಶ್ವರ ಮತ್ತು ಮಂಟೇಸ್ವಾಮಿ ಕಥಾ ಪ್ರಸಂಗಗಳನ್ನು ಇಂಗ್ಲಿಷ್ ಮತ್ತು ಹಿಂದಿಗೆ ಅನುವಾದಿಸಬೇಕು. ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಒದಗಿಸಬೇಕು. ವಿನಾಶದ ಅಂಚಿನಲ್ಲಿರುವ ಕಾವ್ಯಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.ಶಿಕ್ಷಣ ವ್ಯವಸ್ಥೆ ಮತ್ತು ಚರಿತ್ರೆಯಲ್ಲಿ ಹಿಡಿದ ತಪ್ಪು ದಾರಿಗಳ ಪರಿಣಾಮ ನಮ್ಮ ಪರಂಪರೆ ಮರೆಯುವಂತಾಯಿತು. ಈಗ ಆ ಪರಂಪರೆಗೆ ಹಿಂದಿರುಗಬೇಕು. ನಾವು ಉಳಿಯಬೇಕಾದರೆ ಮಂಟೇಸ್ವಾಮಿ ಪರಂಪರೆ ಉಳಿಯಬೇಕು. ಭಾರತದಲ್ಲಿ ಎರಡು ಗುರು ಪರಂಪರೆಗಳಿವೆ. ಉತ್ತರದಲ್ಲಿ ರವಿದಾಸ ಪರಂಪರೆ. ಕರ್ನಾಟಕದಲ್ಲಿ ಮಂಟೇಸ್ವಾಮಿ, ಮಹದೇಶ್ವರ ಮುಖ್ಯಧಾರೆಗಳಿವೆ. ಇವು ಕೊಡೇಕಲ್ಲು ಪರಂಪರೆಯಿಂದ ಬಂದ ಪ್ರವಾಹ. ಶರಣ ಪರಂಪರೆಯ ನಿಜವಾದ ಪರಂಪರೆ ಎಂದರು.ನಮ್ಮ ದೇಶದಲ್ಲಿ 3 ಧಾರ್ಮಿಕ ಪರಂಪರೆಗಳಿವೆ. ಮೊದಲನೆಯದು ಸಮಣ, ಬೌದ್ಧ, ಜೈನ ಇವುಗಳು ವೈರಾಗ್ಯ, ಲೋಕಪರವಾದವು. ಎರಡನೆಯದು ಆಚಾರ್ಯ ಪರಂಪರೆ ವೈದಿಕ, ಆಗಮ- ಜಾತಿ, ಕುಲ, ಮೇಲು ಕೀಳು ಇದೆ. ಮೂರನೆಯದು ಇದೆಲ್ಲಕ್ಕಿಂತ ಮಿಗಿಲಾದ ಗುರು ಪರಂಪರೆ. ಇಲ್ಲಿ ಜಾತಿ, ಕುಲ, ವಿಧಿ ನಿಯಮಗಳಿಲ್ಲ. ಸರ್ವರನ್ನೂ ಸ್ವೀಕರಿಸುತ್ತದೆ ಎಂದು ಅವರು ಹೇಳಿದರು.ಮಂಟೇಸ್ವಾಮಿ, ಮಹದೇಶ್ವರ ಬುಡಕಟ್ಟು ಕಾವ್ಯ ಅಲ್ಲ. ಈ ಪರಂಪರೆಗಳು ವಿಶಾಲಲೋಕ ದೃಷ್ಟಿಯುಳ್ಳ ಪರಂಪರೆ. ಇವುಗಳಲ್ಲಿ ಪುರಾಣ, ಕಾವ್ಯ, ಮೂಢನಂಬಿಕೆ ಹುಟ್ಟಿದರೂ ಲೋಕ ಕಾರುಣ್ಯದಿಂದ ತುಂಬಿ ತುಳುಕುತ್ತಿದೆ. ಕೊಡೇಕಲ್ಲು, ಕಪ್ಪಡಿ, ಚಿಕ್ಕಲ್ಲೂರು ಜಾತ್ರೆಗಳಲ್ಲಿ ಜನರು ಮಹಾ ಪರಂಪರೆಯಲ್ಲಿ ಬದುಕುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಈ ಉತ್ಸವ, ಸಂಭ್ರಮ ಹೆಚ್ಚೆಚ್ಚು ನಡೆಯಬೇಕು ಎಂದು ಅವರು ತಿಳಿಸಿದರು.ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕವಿ ಎಚ್.ಎಸ್. ಶಿವಪ್ರಕಾಶ್ ಅವರ ಮಂಟೇಸ್ವಾಮಿ ನಾಟಕ ಬರೆದು, ದೇವನೂರ ಮಹಾದೇವ ಅವರು ತಮ್ಮ ಕಾದಂಬರಿಯನ್ನು ಮಲೆಯ ಮಹದೇಶ್ವರಗೆ ಅರ್ಪಿಸಿ ಶೈಕ್ಷಣಿಕ ವಲಯಕ್ಕೆ ಅರಿವು ಮೂಡಿಸಿದರು. ದೇವನೂರರು, ದೇವನಾದ ಮಹದೇಶ್ವರರನ್ನು ನೆಲಕ್ಕೆ ತಂದರು. ಹಾಗೆಯೇ ತನ್ನ ಪೂರ್ವಿಕ ದೇವರಾಗಿದ್ದ ಎಂಬುದನ್ನು ರೂಪಿಸಿದ್ದಾಗಿ ಹೇಳಿದರು.ನಾವು ಆಧುನಿಕರ ಭ್ರಮೆಯಲ್ಲಿ ಮುಳುಗದೇ ಆಧುನಿಕೋತ್ತರವಾದ ಹಿಮ್ಮುಖ ಚಲನೆಯಲ್ಲಿ ಬಹಳ ಎಚ್ಚರದಿಂದ ನಮ್ಮ ಸಂಸ್ಕೃತಿಯನ್ನು ಮರುರೂಪಿಸಬೇಕು. ಅನಿಷ್ಠಗಳನ್ನು ತೊಡೆದು ಭವಿಷ್ಯದ ಕಡೆ ಸಾಗಬೇಕು.ಬೆನ್ನ ಹಿಂದೆ ಮಂಟೇಸ್ವಾಮಿ, ಕಣ್ಮುಂದೆ ಅಂಬೇಡ್ಕರ್ ಇರಿಸಿಕೊಳ್ಳೋಣ ಎಂದು ಅವರು ತಿಳಿಸಿದರು.ಕಪ್ಪಡಿ ಕ್ಷೇತ್ರದ ಮಠಾಧಿಪತಿ ಎಂ.ಎಲ್. ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮತ್ತು ಕೊಡೇಕಲ್ಲು ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪನವರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಧರೆಗೆ ಬಂದವರು ಪುಸ್ತಕ ಬಿಡುಗಡೆಗೊಳಿಸಿದರು.ಚಿಂತಕ ಡಾ. ಮಹಾದೇವ ಶಂಕನಪುರ ಪುಸ್ತಕ ಕುರಿತು ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಆಕಾಶವಾಣಿ ಮೈಸೂರು ನಿಲಯದ ಮುಖ್ಯಸ್ಥ ಎಸ್.ಎಸ್. ಉಮೇಶ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ್ಪ, ಬೋಧಿ ಪ್ರಕಾಶನದ ಅಧ್ಯಕ್ಷ ಸತೀಶ್ ಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಉಮೇಶ್, ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ, ಮೈಸೂರು ಗುರುರಾಜ್ ಇದ್ದರು.