ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಪಿ.ಆರ್.ಟಿ ಕಲಾಪ್ರಶಸ್ತಿ ಪ್ರದಾನ ಹಾಗೂ ಪಿ.ಆರ್. ತಿಪ್ಪೇಸ್ವಾಮಿ ಕಲಾಸಂಭ್ರಮ- 2025 ಕಾರ್ಯಕ್ರಮವನ್ನು ಏ. 7 ರಂದು ಆಯೋಜಿಸಿದೆ.ಈ ಬಾರಿ ಬೆಂಗಳೂರಿನ ಹಿರಿಯ ಚಿತ್ರಕಲಾವಿದೆ ಸುಧಾ ಮನೋಹರ್ ಹಾಗೂ ಚಿಕ್ಕಬಳ್ಳಾಪುರದ ಮುಖವೀಣೆ ಅಂಜನಪ್ಪ ಅವರನ್ನು ಪಿ.ಆರ್.ಟಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿಪತ್ರ, ಪ್ರಶಸ್ತಿ ಫಲಕ ಹಾಗೂ ಫಲತಾಂಬೂಲವನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸುಧಾ ಮನೋಹರ್ ಅವರು, ಸ್ವಿಜರ್ಲ್ಯಾಂಡ್ ನಲ್ಲಿ ಕಲಾ ಶಿಕ್ಷಣ ಮುಗಿಸಿ, ಬೆಂಗಳೂರಿನ ಪ್ರತಿಷ್ಠಿತ ಕಲಾ ಕಾಲೇಜಾದ ಚಿತ್ರಕಲಾ ಪರಿಷತ್ ನ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಮುಖವೀಣೆ ಅಂಜನಪ್ಪ ಅವರು ಜನಪದ ಕಲಾಪ್ರಕಾರವಾದ ಮುಖವೀಣೆ ವಾದನವನ್ನು ಶಾಸ್ತ್ರೀಯವಾಗಿ ನುಡಿಸುವ ಮೂಲಕ ಹೆಸರು ಮಾಡಿದ್ದಾರೆ. ರಂಗಗೀತೆ, ಬಯಲಾಟ, ಸಿನಿಮಾ ಗೀತೆಗಳನ್ನು ಸುಲಲಿತವಾಗಿ ನುಡಿಸುತ್ತಾರೆ. ಅವರಿಗೆ ಜಾನಪದ ಅಕಾಡೆಮಿಯ ಕಲಾಪ್ರಶಸ್ತಿ, ಜಾನಪದ ಶ್ರೀ ಕಲಾಪ್ರಶಸ್ತಿ ಲಭಿಸಿದೆ ಎಂದರು.ಮೈಸೂರು ವಿವಿಯ ತಿಪ್ಪೇಸ್ವಾಮಿ ಅಧ್ಯಯನ ಪೀಠ ನೆರವಾದರೆ ಗಂಗೋತ್ರಿಯಲ್ಲಿ, ತಪ್ಪಿದರೆ ಕಲಾನಿಕೇತನ ಶಾಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ. ಮುಂದಿನ ದಿನಗಳಲ್ಲಿ ಸ್ಥಳ ಮತ್ತು ಸಮಯ ತಿಳಿಸುವುದಾಗಿ ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ. ಮಹದೇವಶೆಟ್ಟಿ, ನಿರ್ದೇಶಕ ಎಚ್.ಆರ್. ಚಂದ್ರಶೇಖರಯ್ಯ ಇದ್ದರು.