ಫಕೃದ್ದೀನ್ ಎಂ ಎನ್

ನವಲಗುಂದ:

ಭಕ್ತರು ಬೇಡಿದ ಇಷ್ಟಾರ್ಥ ಪೂರೈಸುವ ಪಟ್ಟಣದ ರಾಮಲಿಂಗ ಕಾಮಣ್ಣನನ್ನು ಪ್ರತಿ ವರ್ಷ ಏಕಾದಶಿ ರಾತ್ರಿಯಂತೆ (ಶನಿವಾರ) ಪ್ರತಿಷ್ಠಾಪಿಸುತ್ತಿದ್ದು ದರ್ಶನ ಪಡೆಯಲು ಲಕ್ಷಾಂತರ ಭಕ್ತರು ರಾಜ್ಯ-ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನಲೆ:

ಸವಣೂರ ನವಾಬರ ಆಡಳಿತಾವಧಿಯಲ್ಲಿ ಸಿದ್ದಿ ಪುರುಷನು ಕಾಮಣ್ಣನನ್ನು ರಚಿಸಲು ಅಪೇಕ್ಷೆ ಪಟ್ಟ. ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಕಟ್ಟಿಗೆ ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಪ್ರಾರಂಭಿಸಿದ. 101 ಗಿಡಮೂಲಿಕೆಗಳಿಂದ ಮೂರ್ತಿ ಮಾಡಬೇಕೆಂದು ಸಂಕಲ್ಪ ತೊಟ್ಟರು ಸಿಕ್ಕಿದ್ದು 100 ಮಾತ್ರ. ಅದರಲ್ಲೇ ಮೂರ್ತಿ ಮಾಡಿ ಒಂದು ರಂಧ್ರ ಬಿಟ್ಟ ಎಂಬ ನಂಬಿಕೆ ಇದೆ. ಇನ್ನೊಂದು ಗಿಡಮೂಲಿಕೆ ಕಟ್ಟಿಗೆ ಸಿಕ್ಕಿದ್ದರೆ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿಯೂ ಇದೆ.


ಗಿಡ ಮೂಲಿಕೆ ಜೋಡಣೆಗಾಗಿ ಆತ ಕೊರೆದ ರಂಧ್ರ ಇಂದಿಗೂ ಕಾಣಬಹುದು. ರಾಮಲಿಂಗ ಕಾಮದೇವ ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ್‌, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ-ವಸತಿ ಇಲ್ಲದವರು ಛತ್ರಿ-ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಸಾಕು ಬೇಡಿಕೆ ಈಡೇರುತ್ತದೆಂಬುದು ಭಕ್ತರ ನಂಬುಗೆ.

ಪಟ್ಟಣದ ಒಟ್ಟು 14 ಓಣಿಯಲ್ಲಿ ವಿವಿಧ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಅವೆಲ್ಲವು ಮೊದಲಿನಿಂದಲೂ ಬಂದ ಪದ್ಧತಿಯಂತೆ ಭಕ್ತರು ದರ್ಶನ ಪಡೆದು ತಮ್ಮ ಹರಕೆ ಅರ್ಪಿಸುತ್ತಾರೆ. ಎಲ್ಲ ಕಾಮಣ್ಣಗಳು ರಾಮಲಿಂಗ ಕಾಮಣ್ಣನ ದರ್ಶನ ಪಡೆದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆದ ಮೇಲೆ ದಹನವಾಗುತ್ತವೆ. ಎಲ್ಲ ಕಾಮಣ್ಣಗಳು ದಹನವಾದ ನಂತರ ಕೊನೆಗೆ ರಾಮಲಿಂಗ ಕಾಮಣ್ಣ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣಗಳ ಸ್ಥಳಕ್ಕೆ ಭೇಟಿ ನೀಡಿ ದಹನವಾಗುತ್ತದೆ. ಇದನ್ನು ಹಿಂದೂ-ಮುಸ್ಲಿಮರು ಸೇರಿಕೊಂಡು ಆಚರಿಸುತ್ತಾರೆ.

ಪೂಜಾರಿಗಳೇ ಇಲ್ಲ:

ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾರೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲ ಎಂಬುದು ವಿಶೇಷ. ಹೋಳಿ ಹುಣ್ಣಿಮೆ ಪೂಜಾ ವಿಧಿ-ವಿಧಾನದಲ್ಲಿಯೂ ಮಂತ್ರ ಘೋಷಣೆ, ಅರ್ಚಣೆಯೋ ಇಲ್ಲ. ಭಕ್ತರೆ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ.

ಹುಣ್ಣಿಮೆ ಮರುದಿನ ರಾಮಲಿಂಗ ಕಾಮಣ್ಣನ ಮೆರವಣಿಗೆ ನಡೆಸಿ ಬೆಳಗ್ಗೆ ಕಾಮದಹನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ರಾಮಲಿಂಗ ಕಾಮಣ್ಣನ ಮೂಲ ಮೂರ್ತಿ ತೆಗೆದು ಅದರ ಬದಲಾಗಿ ಗಡಿಗೆ ಹಾಕಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ದಹನಗೊಳ್ಳುತ್ತಿರುವ ಕಾಮಣ್ಣನ ಗಡಿಗೆ ಮುಂದೆ ಬಿದ್ದರೆ ಮುಂಗಾರು ಉತ್ತಮ ಫಸಲು, ಹಿಂದೆ ವಾಲಿದರೆ ಹಿಂಗಾರು ಫಸಲು ಉತ್ತಮವಾಗಿ ಬರುತ್ತದೆ ಎಂಬ ವಾಡಿಕೆ ಇದೆ.ಬಾಕ್ಸ್ಪ....

ಪಟ್ಟಣದ ರಾಮಲಿಂಗ ಕಾಮಣ್ಣ ಸೇರಿ ವಿವಿಧ ಕಾಮಣ್ಣಗಳು ಪ್ರತಿಷ್ಠಾಪನೆಗೊಂಡು ಫೆ. 28ರಂದು ಬೆಳಗ್ಗೆಯಿಂದ ರಾಮಲಿಂಗ ಕಾಮದೇವನು ದರ್ಶನಕ್ಕೆ ಲಭ್ಯ. ಮಾ. 3ರಂದು ಹೊಳಿ ಹುಣ್ಣಿಮೆ ಆಚರಣೆ, ಮಾ. 4ಕ್ಕೆ ಬಣ್ಣದಾಟ. ರಾತ್ರಿ ಕಾಮದಹನ, ಫೆ. 28ರಿಂದ ಮಾ. 4ರ ವರೆಗೆ ರಾಮಲಿಂಗ ಕಾಮಣ್ಣನ ದರ್ಶನ ಇರುತ್ತದೆ.

ಅನಾರೋಗ್ಯ ಪೀಡಿತರು ಬೆಳ್ಳಿ ಕುದುರೆಯ ಹರಕೆ ಹೊತ್ತು ಪೂಜಿಸಿದರೆ ಆತ ಕುದುರೆಯಂತೆ ಉತ್ಸಾಹಿಯಾಗುವುದು ಖಚಿತ. ಮನೆ ಇಲ್ಲದವರು ಬೆಳ್ಳಿಯ ಛತ್ರಿ, ಉದ್ಯೋಗ, ಬದುಕಿಗೆ ನೆಲೆ ಬಯಸುವವರು ಬೆಳ್ಳಿಯ ಪಾದದ ಹರಕೆ ಹೊತ್ತು ಹರಕೆಯ ಸಾಮಗ್ರಿ ಪೂಜಿಸಿದರೆ ಅವರ ಬೇಡಿಕೆ ಈಡೇರಿತ್ತವೆ ಎಂಬುದು ಭಕ್ತರ ನಂಬುಗೆ.

ಕುಮಾರ ಕಲಾಲ, ಕಾಂಗ್ರೆಸ್ ಮುಖಂಡ