ಸಾರಾಂಶ
ಕನ್ನಡಪ್ರಭವಾರ್ತೆ ಚಾಮರಾಜನಗರ
ನಾಯಕ ಜನಾಂಗದ ಪರಿವಾರ, ತಳವಾರ ಪದವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ ಬಿಜೆಪಿ ಪಕ್ಷದ ಋಣವನ್ನು ನಾಯಕ ಸಮುದಾಯ ತೀರಿಸಲು ಬಿಜೆಪಿ ಪಕ್ಷವನ್ನು ನಾಯಕ ಸಮುದಾಯ ಬೆಂಬಲಿಸಲಿದೆ ಎಂದು ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಅಪ್ಪಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಠ ಪಂಗಡಕ್ಕೆ ನಾಯಕ ಜನಾಂಗದ ಪರ್ಯಾಯ ಪದ ಪರಿವಾರ, ತಳವಾರ ಜನಾಂಗವನ್ನು ಸೇರಿಸಬೇಕೆಂದು 46 ವರ್ಷಗಳ ಕಾಲ ಸಾಕಷ್ಟು ಹೋರಾಟ ಮಾಡಲಾಗಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗ ನಮ್ಮ ಮನವಿಯನ್ನು ಪುರಸ್ಕರಿಸಿ ಬೇಡಿಕೆಯನ್ನು ಈಡೇರಿಸಿತ್ತು. ಅದರ ಋಣ ನಾಯಕ ಜನಾಂಗದ ಮೇಲಿರುವುದರಿಂದ ನಾಯಕ ಜನಾಂಗ ಋಣ ತೀರಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಲಿದೆ ಎಂದರು.
ರಾಜ್ಯಾದ್ಯಂತ ನಾಯಕ ಜನಾಂಗ ಬಿಜೆಪಿ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಲಾಗಿದ್ದು, ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿರುವ 2.70 ಲಕ್ಷ ನಾಯಕ ಜನಾಂಗದ ಮತದಾರರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿರುವ 1.40 ಲಕ್ಷ ನಾಯಕ ಜನಾಂಗದ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದೇವೆ ಎಂದರು. ನಾಯಕ ಸಮಾಜದ ನಿರ್ಣಯ ತೆಗೆದುಕೊಂಡಿದ್ದು, ಕಂಕಣ ಬದ್ದವಾಗಿ, ಕಟ್ಟಿಬದ್ದವಾಗಿ ಬಿಜೆಪಿ ಬೆಂಬಲಿಸಿ ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಲಿದ್ದೇವೆ ಎಂದರು.ಕೇಂದ್ರ ಬರ ಪರಿಹಾರ ನಿಗಮ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಏ.23ರಂದು 3 ಗಂಟೆಗೆ ಎಸ್ಟಿ ಸಮುದಾಯದ ಸಮಾವೇಶವನ್ನು ಚಾಮರಾಜನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಸ್ಟಿ ಸಮುದಾಯದ ರಾಜ್ಯಧ್ಯಕ್ಷರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಸುಂದರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್, ಮುಖಂಡರಾದ ಚಂದ್ರಶೇಖರ್, ಶಂಕರ್ ಇದ್ದರು.