ಸಾಹಿತ್ಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ: ಶಾಸಕ ಭೀಮಸೇನ ಚಿಮ್ಮನಕಟ್ಟಿ

| Published : Feb 11 2024, 01:45 AM IST

ಸಾಹಿತ್ಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ: ಶಾಸಕ ಭೀಮಸೇನ ಚಿಮ್ಮನಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ತಾಲೂಕಿನ ಕಟಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬಾಗಲಕೋಟೆ ಹಾಗೂ ತಾಲೂಕು ಘಟಕ ಗುಳೇದಗುಡ್ಡ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅಧ್ಯಕ್ಷತೆ ವಹಿಸಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಾಹಿತಿಗಳು ಸ್ಥಳ ಗುರುತಿಸಿ ಸಾಹಿತ್ಯ ಭವನ ಕಟ್ಟಡ ನಿರ್ಮಿಸಿಕೊಂಡು ಸಾಹಿತ್ಯ ಚಟುವಟಿಕೆ ಮೂಲಕ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಶ್ರಮಿಸಬೇಕು ಎಂದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕತೆ, ಕಾದಂಬರಿ ವ್ಯಕ್ತಿಯ ಬದುಕಿನ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಸಾಹಿತ್ಯ ನಮ್ಮ ಬದುಕಿನ ಜೀವಾಳವಾಗಬೇಕು. ಆ ನಿಟ್ಟಿನಲ್ಲಿ ಗುಳೇದಗುಡ್ಡ ತಾಲೂಕಿನಲ್ಲಿ ಸ್ಥಳ ಗುರುತಿಸಿದರೆ ಸಾಹಿತ್ಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದರು.

ಶನಿವಾರ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬಾಗಲಕೋಟೆ ಹಾಗೂ ತಾಲೂಕು ಘಟಕ ಗುಳೇದಗುಡ್ಡ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತಿಗಳು ಸ್ಥಳ ಗುರುತಿಸಿ ಸಾಹಿತ್ಯ ಭವನ ಕಟ್ಟಡ ನಿರ್ಮಿಸಿಕೊಂಡು ಸಾಹಿತ್ಯ ಚಟುವಟಿಕೆ ಮೂಲಕ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಶ್ರಮಿಸಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಚೆನ್ನಪ್ಪ ಕಟ್ಟಿ, ಸಾಹಿತ್ಯ, ಕಾವ್ಯ, ಕತೆ ಮುಂತಾದವು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಸಮಾಜದಲ್ಲಿ ಸೌಹಾರ್ದತೆ, ಶಾಂತಿ ನೆಲೆಸುವ ನಿಟ್ಟಿನಲ್ಲಿ ಬೆಂಕಿ ಶಮನಗೊಳಿಸುವ, ನೆರೆಹೊರೆಯವರನ್ನು ಮತ್ತು ಸಮಾಜ, ನಾಡು ನುಡಿಯನ್ನು ಗೌರವಿಸುವ ಸಾಹಿತ್ಯ ರಚನೆ ನಮ್ಮ ಆದ್ಯತೆಯಾಗಬೇಕು. ಸಮಾಜದಲ್ಲಿ ಒಳ್ಳೆಯದನ್ನು ಪರಿಚಯಿಸುವ ಸಾಹಿತ್ಯ ರಚನೆ ಆದಾಗ ಮಾತ್ರ ಸಾಹಿತ್ಯಕ್ಕೆ ತನ್ನದೇ ಆದ ವಿಶೇಷ ಮಹತ್ವ ಬರುತ್ತದೆ ಎಂದು ಹೇಳಿದರು.

ಡಾ.ಪಿ.ಎಂ. ಹುಗ್ಗಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಡು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದೆ. ಅನಾದಿ ಕಾಲದಿಂದಲೂ ಸಾಹಿತ್ಯ ಚಟುವಟಿಕೆ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿದರು. ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಎಸ್.ಐ. ರಾಜನಾಳ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪಿ.ಎಂ.ಹುಗ್ಗಿ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಡಿ.ಡಿ.ಪಿ.ಐ. ಬಿ.ಕೆ. ನಂದನೂರ್ ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟಿಸಿ, ವಿವಿಧ ಪುಸ್ತಕ ಬಿಡುಗಡೆಗೊಳಿಸಿದರು. ಕಟಗೇರಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ದ್ಯಾವಣ್ಣವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಡಾ.ಪಿ.ಎಂ. ಹುಗ್ಗಿ ಹಾಗೂ ಡಾ.ಸಿ.ಎಂ.ಜೋಶಿ ಅವರ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಡಾ.ಎಚ್.ಎಸ್. ಘಂಟಿ, ಸ್ವಾಗತಿಸಿದರು. ಮಹೇಶ ಹೊಸಗೌಡರ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಕೆ. ತಳವಾರ, ಟಿ.ಎನ್. ಮೊಕಾಶಿ, ಬಿ.ಎಸ್. ಮದ್ಲಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ, ಡಾ.ಚಂದ್ರಶೇಖರ ಕಾಳನ್ನವರ, ಎಂ.ಟಿ. ಮೊಕಾಶಿ, ಭೀಮಸಿ ಪೂಜಾರ, ಎ.ಎಸ್. ಕಾಡರ, ಯಲ್ಲಪ್ಪ ಮನ್ನಿಕಟ್ಟಿ, ಎಂ.ಪಿ. ಹಾಲಿಗೇರಿ, ಪ್ರಮೋದ ಕವಡಿಮಟ್ಟಿ ಇತರರು ಉಪಸ್ಥಿತರಿದ್ದರು.