ನದಿಮಾಲಿನ್ಯ ಜಾಗೃತಿಗಾಗಿ ‘ನೀರ ದಾರಿಯ ನಡೆ’ ಪಾದಯಾತ್ರೆ

| Published : Jul 07 2024, 01:19 AM IST

ನದಿಮಾಲಿನ್ಯ ಜಾಗೃತಿಗಾಗಿ ‘ನೀರ ದಾರಿಯ ನಡೆ’ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾಕಾಲೇಜು ವಿದ್ಯಾರ್ಥಿಗಳು, ಪುರಸಭೆ, ಮಹಾನಗರ ಪಾಲಿಕೆ ಅಧಿಕಾರಿಗಳ ಭೇಟಿ, ರೈತರೊಂದಿಗೆ ಸಂವಾದ, ದೇವಸ್ಥಾನ, ಇಗರ್ಜಿ, ದರ್ಗಾಗಳಿಗೆ ಭೇಟಿ, ತುಂಬೆ ಟ್ಯಾಂ, ನೀರುಶುದ್ಧೀಕರಣ ಘಟಕ ಭೇಟಿ, ದೋಣಿ ಪಯಣ ಹೀಗೆ ಹಲವು ಚಟುವಟಿಕೆಗಳ ಜೊತೆ ಪಾದಯಾತ್ರೆ ಮೂಡಿಬರಲಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಯುವ ಮುನ್ನಡೆ ಕರ್ನಾಟಕ, ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು ಇದರ ನೇತೃತ್ವದಲ್ಲಿ ನದಿಮಾಲಿನ್ಯದ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ‘ಪರಿಸರ ನ್ಯಾಯಕ್ಕಾಗಿ ಯುವಧ್ವನಿ- ನೀರದಾರಿಯ ನಡೆ’ ಪಾದಯಾತ್ರೆಯು ಜು.೭ರಂದು ಭಾನುವಾರ ಬಂಟ್ವಾಳದಿಂದ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ನಡೆಯುವ ಪಾದಯಾತ್ರೆಯು ಮಂಗಳವಾರ ಉಳ್ಳಾಲದಲ್ಲಿ ಸಮಾಪನಗೊಳ್ಳಲಿದೆ.

ನದಿಯ ಇಕ್ಕೆಲಗಳಲ್ಲಿನ ಅರಣ್ಯನಾಶ, ತ್ಯಾಜ್ಯ ನೀರು, ಮರಳು ಗಣಿಗಾರಿಕೆ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನದಿಗೆ ಎಸೆಯುವುದರಿಂದ ಉಂಟಾಗುವ ಅಪಾಯಗಳನ್ನು ಜನತೆಗೆ ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವುದು ಪಾದಯಾತ್ರೆ ಉದ್ದೇಶವಾಗಿದೆ. ಸಾವಜನಿಕರು, ಶಾಲಾಕಾಲೇಜು ವಿದ್ಯಾರ್ಥಿಗಳು, ಪುರಸಭೆ, ಮಹಾನಗರ ಪಾಲಿಕೆ ಅಧಿಕಾರಿಗಳ ಭೇಟಿ, ರೈತರೊಂದಿಗೆ ಸಂವಾದ, ದೇವಸ್ಥಾನ, ಇಗರ್ಜಿ, ದರ್ಗಾಗಳಿಗೆ ಭೇಟಿ, ತುಂಬೆ ಟ್ಯಾಂ, ನೀರುಶುದ್ಧೀಕರಣ ಘಟಕ ಭೇಟಿ, ದೋಣಿ ಪಯಣ ಹೀಗೆ ಹಲವು ಚಟುವಟಿಕೆಗಳ ಜೊತೆ ಪಾದಯಾತ್ರೆ ಮೂಡಿಬರಲಿದೆ. ಬಡ್ಡಕಟ್ಟೆಯಲ್ಲಿ ಚಾಲನೆ: ಭಾನುವಾರ ಬೆಳಿಗ್ಗೆ ಬಡ್ಡಕಟ್ಟೆಯಲ್ಲಿ ರುದ್ರಭೂಮಿ ಬಳಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಬಳಿಕ ಬಂಟ್ವಾಳ, ಬಂಟ್ವಾಳ ಗ್ರಾಮಾಂತ ಠಾಣೆಗೆ ಭೇಟಿ, ಅಗ್ನಿಶಾಮಕ ದಳದ ಕಚೇರಿಗೆ ಭೇಟಿ, ಪಾಣೆಮಂಗಳೂರು ಬ್ರಿಡ್ಜ್‌ ಮೂಲಕ ನಂದಾವರ ದೇವಸ್ಥಾನಕ್ಕೆ ಭೇಟಿ ನಡೆಯಲಿದೆ. ಮಧ್ಯಾಹ್ನದ ಬಳಿಕ ಪಾವೂರು ದ್ವೀಪ, ಹತ್ತಿರದ ಚರ್ಚ್‌ ಹಾಗೂ ಇನೋಳಿ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪಾದಯಾತ್ರೆ ತಂಡ, ಬಳಿಕ ರೈತರ ಜೊತೆ ಮಾತುಕತೆಯೊಂದಿಗೆ ಮೊದಲ ದಿನದ ಪಾದಯಾತ್ರೆ ಅಂತಿಮಗೊಳ್ಳಲಿದೆ.

ಎರಡನೇ ದಿನ ಬಂಟ್ವಾಳ ಪುರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಭೇಟಿಯೊಂದಿಗೆ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಸರ್ಕಾರಿ ಶಾಲಾ ಕಾಲೇಜು ಭೇಟಿ, ಬಿ.ಸಿ.ರೋಡು ಪೇಟೆಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಬಂಟ್ವಾಳ ನಗರ ಠಾಣೆಗೆ ಭೇಟಿ, ಮಸೀದಿ ಭೇಟಿ, ತುಂಬೆ ವೆಂಟೆಡ್‌ ಡ್ಯಾಂ ವೀಕ್ಷಣೆ, ಅಡ್ಯಾರ್‌ ಹೊಸ ಸೇತುವೆ ವೀಕ್ಷಣೆ, ಪದ್ಮಶ್ರೀ ಹರೇಕಳ ಹಾಜಬ್ಬರ ಭೇಟಿ, ಪಂಪ್‌ವೆಲ್‌ ವೃತ್ತದ ತನಕ ಸಾಗಿ ಎರಡನೇ ದಿನದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.

ಮೂರನೇ ದಿನವಾದ ಜು.೯ರಂದು ಪಂಪ್‌ವೆಲ್‌ನಿಂದ ಆರಂಭಗೊಂಡು ಉಳ್ಳಾಲ ಸೇತುವೆ ಬಳಿ ವೀಕ್ಷಣೆ, ತೊಕ್ಕೊಟ್ಟು ಪೇಟೆಯಲ್ಲಿ ಜನಜಾಗೃತಿ, ಉಳ್ಳಾಲ ಪೇಟೆಯಲ್ಲಿ ಜನಜಾಗೃತಿ ನಡೆಸಿ ಉಳ್ಳಾಲ ಅಳಿವೆಗೆ ಸಾಗಿ ನೇತ್ರಾವತಿ ಕಡಲು ಸೇರು ಸ್ಥಳದಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ನಂತರ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ನೀಡಲಾಗುವುದು ಎಂದು ಯುವ ಮುಂದಾಳು ಆಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.