ನೀಟ್ ಪರೀಕ್ಷೇಲಿ ಎನ್.ಟಿ.ಎ ಯಡವಟ್ಟು: ಎನ್ಸಿಆರ್ ಟಿ ನಿರ್ದೇಶಕ ಸ್ಪಷ್ಟನೆ

| Published : Jun 18 2024, 12:46 AM IST

ಸಾರಾಂಶ

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದು, ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರಿಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿವೆ

ಕನ್ನಡಪ್ರಭ ವಾರ್ತೆ ಮೈಸೂರು

ನೀಟ್ ಪ್ರಶ್ನೆಪತ್ರಿಕೆಯಲ್ಲಿ ಕಂಡುಬಂದಿರುವ ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಯಡವಟ್ಟೇ ಕಾರಣ ಹೊರತು ಎನ್.ಸಿ.ಆರ್.ಟಿ ಅಲ್ಲ ಎಂದು ಎನ್ಸಿಆರ್ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟಪಡಿಸಿದರು.

ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಸಿ.ಆರ್.ಟಿಯ 2019ರ ವರ್ಷದ ಪಠ್ಯಕ್ರಮದಲ್ಲಿ ಇರುವ ವಿಷಯ ಆಧರಿಸಿ ಅವರು ಪ್ರಶ್ನೆ ಪತ್ರಿಕೆ ಸಿದ್ಧಗೊಳಿಸಿದ್ದಾರೆಯೇ ಹೊರತು, 2020 ರಲ್ಲಿ ಪ್ರಕಟಗೊಂಡ ಹೊಸ ಪಠ್ಯಕ್ರಮದ ಅನುಸಾರ ಅವರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಲ್ಲ. ಈ ವಿಷಯದಲ್ಲಿ ನಮ್ಮನ್ನು ದೂರುವುದು ಸರಿಯಲ್ಲ ಎಂದರು.

ಏಕೆಂದರೆ ಹೊಸ ಪಠ್ಯಕ್ರಮದ ಪೂರ್ಣ ಪಾಠ ವೆಬ್ ಸೈಟ್ ನಲ್ಲಿದೆ. ಇದನ್ನು ಅವರು ಗಮನಿಸಬೇಕಿತ್ತು. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದು, ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರಿಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿವೆ ಎಂದು ಅವರು ಹೇಳಿದರು.

ಶಿಕ್ಷಣ ನೀತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಸ್ವತಂತ್ರ್ಯವಾಗಿದೆ. ಅಲ್ಲದೇ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇದೆ. ಆದ್ದರಿಂದ ನಮ್ಮ ಸಂಸ್ಥೆಯ ಕಾರ್ಯವೆನಿದ್ದರೂ ಪಠ್ಯಕ್ರಮಗಳನ್ನು ಸಿದ್ಧಪಡಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು ಮಾತ್ರ. ಅನುಷ್ಠಾನದ ವಿಚಾರ ಅವರಿಗೆ ಬಿಟ್ಟದು. ಎನ್.ಇ.ಪಿ ಕುರಿತು ಸಲಹಾ ಸಮಿತಿಯಲ್ಲಿ ಇರುವ ಕೆಲವು ಸದಸ್ಯರು ಈ ಕುರಿತು ಮಾತನಾಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ನಮ್ಮದಲ್ಲ ಎಂದರು.

ಎನ್.ಸಿ.ಆರ್.ಟಿ ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಎನ್ನುವುದನ್ನು ಹಾಗೇ ಭಾರತ ಎನ್ನುವುದನ್ನೂ ಉಪಯೋಗಿಸುತ್ತೇವೆ. ಏಕೆಂದರೆ ನಮ್ಮ ಸಂವಿಧಾನದಲ್ಲೇ ಎರಡು ಹೆಸರುಗಳು ಉಲ್ಲೇಖವಾಗಿವೆ. ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಎಲ್ಲಿ ಯಾವುದನ್ನು ಉಪಯೋಗಿಸಬೇಕು ಅದನ್ನು ಉಪಯೋಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಬ್ರಿ ಮಸೀದಿ, ಅಯೋಧ್ಯೆ ಮುಂತಾದ ಕುರಿತು ಜೈರಾಮ್ ರಮೇಶ್ ಅವರು ಮಾಡಿದ್ದ ಆರೋಪಕ್ಕೆ ಉತ್ತರಿಸಲು ಅವರು ನಿರಾಕರಿಸಿದರು. ಎನ್.ಸಿ.ಆರ್.ಟಿ ಯಿಂದ ಹೊಸ-ಹೊಸ ಪಠ್ಯಕ್ರಮ ಸಿದ್ಧಪಡಿಸಲಾಗುತ್ತಿದೆ. ಎನ್.ಇ.ಪಿಗೆ ಅನುಗುಣವಾಗಿ ಕಲೆ, ಸಂಗೀತ, ಪರಿಸರ ವಿಷಯದಲ್ಲಿ ಹೊಸ ಪಠ್ಯಗಳು ರಚನೆಯಾಗಿವೆ. ವಿದ್ಯಾರ್ಥಿಗಳಿಗೆ ಹೊರೆಯಾಗದೇ ಬಹಳ ಸುಲಭವಾಗಿ ಕಲಿತುಕೊಳ್ಳುವಂತೆ ಪಠ್ಯ ಸಿದ್ಧಪಡಿಸಲಾಗಿದೆ ಎಂದರು.

ಹೊಸ ಪಠ್ಯಕ್ರಮವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮೊದಲಿಗೆ ಶಿಕ್ಷಕರಿಗೆ ಸೇತುಬಂಧ ಕಾರ್ಯಕ್ರಮ ಮಾಡಲಾಗುತ್ತದೆ. ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಫೌಂಡೇಷನ್ ಕೋರ್ಸ್ ತರಗತಿ ಆಯೋಜಿಸುವುದಾಗಿ ಅವರು ತಿಳಿಸಿದರು.