ಮಂಗಳೂರು: ನೀಟ್‌ ಅಕ್ರಮ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ. ನೀಟ್‌ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್‌ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು, ನೀಟ್‌ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ 20 ಮಂದಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ಈ ಬೇಡಿಕೆ ಈಡೇರುವ ವರೆಗೆ ದೇಶವ್ಯಾಪಿ ಕಾಂಗ್ರೆಸ್‌ ಹೋರಾಟ ಮುಂದುವರಿಯಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್‌ ಅಕ್ರಮ ವಿರುದ್ಧ ಹೋರಾಟ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ, ಲೋಕಸಭೆ ಅಧಿವೇಶನದಲ್ಲೂ ನೀಟ್‌ ವಿರುದ್ಧ ಮಾತನಾಡಲು ವಿಪಕ್ಷಗಳಿಗೆ ಅವಕಾಶ ನೀಡುತ್ತಿಲ್ಲ. ನೀಟ್‌ ವಿರುದ್ಧ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ಭಾರತ ವಿಶ್ವದ ಎದುರು ತಲೆತಗ್ಗಿಸುವಂತೆ ಮಾಡಿದೆ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತಿತರ ಮುಖಂಡರನ್ನೂ ಬಂಧಿಸಿದ್ದು, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಂಗ್ರೆಸ್‌ ಈ ಹೋರಾಟವನ್ನು ಬೆಂಬಲಿಸಿದೆಯೇ ವಿನಃ ಕೊಕ್ರೋಚ್‌ ಪಾರ್ಟಿಗೆ ಬೆಂಬಲ ನೀಡಿಲ್ಲ. ನೀಟ್‌ ಗೊಂದಲದಿಂದ ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರು, ರಕ್ಷಕರ ಬೇಡಿಕೆಯೂ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆ ನೀಡಬೇಕು ಎಂಬುದೇ ಆಗಿದೆ ಎಂದರು.

ಹಿಂದೆ ಸಿಎಂ ಆಗಿದ್ದ ವೀರಪ್ಪ ಮೊಯ್ಲಿ ಅವರು ಕರ್ನಾಟಕದಲ್ಲಿ ಸಿಇಟಿ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಬಳಿಕ ಅದನ್ನೇ ಕೇಂದ್ರ ಸರ್ಕಾರ ನೀಟ್‌ ಆಗಿ ಪರಿವರ್ತಿಸಿತು. ಆಗ ರಾಜ್ಯದಲ್ಲಿ ಸಿಇಟಿ ಗೊಂದಲ ಇರಲಿಲ್ಲ, ಈಗ ನೀಟ್‌ ಪರೀಕ್ಷೆಯನ್ನು ನೀಟಾಗಿ ನಿಭಾಯಿಸಲು ಕೇಂದ್ರದಿಂದ ಸಾಧ್ಯವಾಗದಿದ್ದರೆ, ಅದನ್ನು ರಾಜ್ಯಕ್ಕೆ ವಹಿಸಲಿ ಎಂದವರು ಆಗ್ರಹಿಸಿದರು. ಸರ್ಕಾರಕ್ಕೆ ಯೋಜನೆ ಪ್ರಸ್ತಾವನೆ: ಅಪಘಾತ ವೇಳೆ ತುರ್ತು ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ‘ಪಿಎಂ ರಾಹತ್‌’ ಯೋಜನೆಯನ್ನು ಘೋಷಿಸಿದ್ದೇ ವಿನಃ ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನಗೊಳಿಸಿಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ‘ಹರೀಶ್‌ ಸಾಂತ್ವನ’ ಯೋಜನೆ ಜಾರಿಗೆ ತರಲಾಯಿತು. ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಕೈಬಿಟ್ಟಿದೆ. ‘ಪಿಎಂ ರಾಹತ್‌’ ಯೋಜನೆಯಡಿ 1 ಲಕ್ಷ ರು. ಪರಿಹಾರ ಮೊತ್ತ ನೀಡಲಾಗುತ್ತದೆ. ಹಾಗಾಗಿ ಅದನ್ನು ಸೇರಿಸಿಕೊಂಡು ರಾಜ್ಯ ಸರ್ಕಾರವೇ 2.50 ಲಕ್ಷ ರು. ಮೊತ್ತವನ್ನು ಏಳು ದಿನಗಳ ಅವಧಿಯಲ್ಲಿ ಚಿಕಿತ್ಸೆಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.