ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಶನಿವಾರ ಎಸ್ಎಫ್ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ರಾಣಿಬೆನ್ನೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಶನಿವಾರ ಎಸ್ಎಫ್ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಪ್ರತಿಭಟನೆಯಲ್ಲಿ ತೆರಳಿದ ವಿದ್ಯಾರ್ಥಿಗಳು ಕೋರ್ಟ್ ಸರ್ಕಲ್ (ಜಗಜ್ಯೋತಿ ಬಸವೇಶ್ವರ ಸರ್ಕಲ್) ವರೆಗೆ ಸಾಗಿಬಂದರು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನ್ಯಾಶನಲ್ ಟೆಸ್ಟ್ ಏಜೆನ್ಸಿ (ಎನ್ಟಿಎ) ರದ್ದುಪಡಿಸಲು ಆಗ್ರಹಿಸಿದರು.ಈ ಸಮಯದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ನಗವತ್ ಮಾತನಾಡಿ, ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರ ಕೋರ್ಸ್ಗಳಿಗೆ ಮೇ 3ರಂದು ನಡೆದ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ರದ್ದುಪಡಿಸಲಾಗಿದೆ. ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್ಟಿಎ) ಪರೀಕ್ಷೆಯ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಮಾನಸಿಕ ಒತ್ತಡ ಮತ್ತು ತೊಂದರೆಗಳಿಗೆ ಬಿಜೆಪಿ ಸರ್ಕಾರವೇ ಜವಾಬ್ದಾರರಾಗಿರಬೇಕು ಎಂದರು.
ತಾಲೂಕು ಕಾರ್ಯದರ್ಶಿ ಕೃಷ್ಣ ನಾಯ್ಕ, ಕಾಲೇಜ್ ಘಟಕದ ಉಪಾಧ್ಯಕ್ಷ ತರುಣ್ ಎಂ.ಜೆ. ಮಾತನಾಡಿದರು.ಗೌತಮ್ ನಾಯ್ಕ್, ಚಂದು ಎಂ., ತರುಣ್ ಎಂ., ಚರಣ್ ಸಿ., ಅಶೋಕ್ ಲಮಾಣಿ, ರೀಶಬ್ ಬ್ಯಾಡಗಿ, ಸೃಷ್ಟಿ ಕೋಪರದೆ, ಶಾಂತಾ ಕುಂಬಾರ, ನೇತ್ರಾ ಮೂಲಿಮನಿ, ಹರ್ಷಿತಾ ತೋಟದ, ಹೊನ್ನಮ್ಮ ಚೌಡಮ್ಮನವರ, ಕವನ್ ಪಿ., ಪವಿತ್ರಾ ಸಿ., ಗಾಯಿತ್ರಿ ಕೆ., ಅರ್ಪಿತಾ ಜಿ., ತೇಜಸ್ವಿನಿ ಪಿ., ಶ್ರದ್ಧಾ ಎನ್., ನಜಹತ್ ಅನ್ಮೊಲೆ, ಜಯವ್ವ ಎನ್.ಬಿ. ಪಾಲ್ಗೊಂಡಿದ್ದರು.