ಸಾರಾಂಶ
ಹೊಸಕೋಟೆ: ತಾಲೂಕಿನಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಣೆಗೆ ಈಗಾಗಲೆ ಜಾಗ ಗುರುತಿಸಿ ಪಂಚಾಯತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಪಟ್ಟಿ ಸಿದ್ಧತೆಗೆ ಸೂಚಿಸಿದ್ದರೂ ಕೆಲ ಗ್ರಾಮ ಪಂಚಾಯತಿಯ ಪಿಡಿಒಗಳು ನಿರ್ಲಕ್ಷ್ಯ ಧೋರಣೆ ತೋರಿರುವುದು ಸಹಿಸುವುದಿಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ಪಿಡಿಒಗಳ ವಿರುದ್ಧ ಕಿಡಿಕಾರಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶ್ರಯ ನಿವೇಶನ ಫಲಾನುಭವಿಗಳ ಪಟ್ಟಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಚುನಾವಣೆಗೂ ಮುನ್ನ ಗುರುತಿಸಿರುವ ಸರ್ಕಾರಿ ಜಮೀನುಗಳನ್ನು ಕಂದಾಯ ಇಲಾಖೆ ಸಹಯೋಗದಲ್ಲಿ ಸರ್ವೆ ಮಾಡಿಸಿ ಪಂಚಾಯತಿ ಅಧ್ಯಕ್ಷರ ಸಮಕ್ಷಮದಲ್ಲಿ ಸರ್ವ ಸದಸ್ಯರ ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ತಾಲೂಕಿನ ಕೆಲ ಪಂಚಾಯತಿ ಪಿಡಿಒಗಳು ನಿರ್ಲಕ್ಷ್ಯ ವಹಿಸಿದ್ದು ಸಭೆಯಲ್ಲಿ ಎದ್ದು ಕಾಣುತ್ತಿದೆ. ಈ ಬಗ್ಗೆ ಒಂದು ಅವಕಾಶ ನೀಡಿ ಎಷ್ಟು ದಿನದಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳನ್ನು ಗುರುತಿಸುತ್ತೀರಿ ಎಂದು ಪ್ರಶ್ನಿಸಿದರು. ಆದಷ್ಟು ಬೇಗ ಈ ಯೋಜನೆ ಜಾರಿಗೊಳಿಸಿ ಬಡವರಿಗೆ ಸೂರು ನೀಡಬೇಕಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಎಂ ವಿಜಯ್ ಕುಮಾರ್, ಇಒ ನಾರಾಯಣ ಸ್ವಾಮಿ, ಸಿಡಿಪಿಒ ದಿವ್ಯ, ಪಿಅರ್ಡಿ ಎಡಿ ತ್ರಿವೇಣಿ ಹಾಗೂ ತಾಲೂಕಿನ 28 ಗ್ರಾಮ ಪಂಚಾಯತಿಯ ಪಿಡಿಒಗಳು ಭಾಗವಹಿಸಿದ್ದರು.ಫೋಟೋ: 25 ಹೆಚ್ಎಸ್ಕೆ 3ಹೊಸಕೋಟೆಯ ತಾಲೂಕು ಪಂಚಾಯತಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಆಶ್ರಯ ಯೋಜನೆ ಫಲಾನುಭವಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.