ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡಲ್ಲ: ಸಚಿವೆ ಹೆಬ್ಬಾಳಕರ

| Published : Dec 15 2024, 02:03 AM IST

ಸಾರಾಂಶ

ಅನಗತ್ಯ ರಾಜಕೀಯ ಮಾಡುವ ವಿಘ್ನ ಸಂತೋಷಿಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅನಗತ್ಯ ರಾಜಕೀಯ ಮಾಡುವ ವಿಘ್ನ ಸಂತೋಷಿಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಶನಿವಾರ ರಾಯಚೂರು-ಬಾಚಿ ರಾಜ್ಯ ಹೆದ್ದಾರಿಯ 20 ಕಿಮೀ ಅಭಿವೃದ್ಧಿಪಡಿಸುವ ₹9 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೇವಲ ಭಾಷೆ, ಧರ್ಮದ ವಿಚಾರದಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಮಾಡಲಾಗುತ್ತಿದೆ. ಅಂಥವರಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ. ಅವರು ವಿಘ್ನ ಸಂತೋಷಿಗಳು. ಈ ಬಾರಿ ನಿರಂತರ ಮಳೆಯಿಂದಾಗಿ ಹಲವು ಕಾಮಗಾರಿಗಳು ವಿಳಂಬವಾಗಿವೆ. ಅಭಿವೃದ್ಧಿ ವಿಚಾರದಲ್ಲಿ ನಾನ್ಯಾವತ್ತೂ ರಾಜಕೀಯ ಮಾಡಲ್ಲ. ಯಾರು, ಯಾವ ಪಕ್ಷ, ಯಾವ ಜಾತಿ ಎನ್ನುವ ಕುರಿತು ಯೋಚಿಸುವುದೂ ಇಲ್ಲ ಎಂದು ಹೇಳಿದರು.

ಮಕ್ಕಳನ್ನು ಶಾಲೆಗೆ ದಾಖಲಿಸಲು, ಹಾಸ್ಟೆಲ್‌ಗೆ ಸೇರಿಸಲು, ವರ್ಗಾವಣೆ ಮಾಡಿಸಿಕೊಳ್ಳಲು ಹೀಗೆ ಹಲವು ವಿಚಾರಗಳಿಗೆ ಜನರು ನನ್ನ ಬಳಿ ಬರುತ್ತಾರೆ. ನಿತ್ಯ ನೂರಾರು ಜನರು ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಯಾವುದೇ ವಿಷಯಕ್ಕೆ ನನ್ನ ಬಳಿ ಬಂದರೂ ಪರಿಹಾರ ನೀಡುತ್ತಾ ಬಂದಿದ್ದೇನೆ. ಇಡೀ ರಾಜ್ಯಕ್ಕೆ ನಾನು ಮಂತ್ರಿ ಇರಬಹುದು. ಆದರೆ, ಗ್ರಾಮೀಣ ಕ್ಷೇತ್ರಕ್ಕೆ ಎಂದಿಗೂ ಮನೆಮಗಳು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ ಪ್ರತಿವರ್ಷ ಸಾವಿರಾರು ಕೋಟಿ ರುಪಾಯಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಹೇಳಿದರೂ ತಕ್ಷಣ ಸ್ಪಂದಿಸಿ ಕೆಲಸ ಮಾಡಿಕೊಡುತ್ತಾರೆ. ಇಂಥವರನ್ನು ಶಾಸಕರನ್ನಾಗಿ ಪಡೆದಿರುವುದು ನಮ್ಮ ಪುಣ್ಯ ಎಂದರು.

ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ, ಮುಖಂಡರಾದ ಬಾಬಣ್ಣ ನರೋಟಿ, ಸಂಜಯ ಪಾಟೀಲ, ಮಾರುತಿ ಪಾಟೀಲ, ಮಹದೇವ ಕಂಗ್ರಾಳ್ಕರ, ಬಾವುರಾವ ಗಡ್ಕರಿ ಸೇರಿದಂತೆ ಸುಳಗಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ರೈತ ಸಮುದಾಯ ಭವನಕ್ಕೆ ಶಂಕುಸ್ಥಾಪನೆ:

ಸುಳಗಾ ಗ್ರಾಮದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ರೈತ ಸಮುದಾಯ ಭವನ ನಿರ್ಮಾಣಕ್ಕೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು‌. ಸಮುದಾಯ ಭವನ ನಿರ್ಮಾಣದಿಂದ ರೈತರಿಗೆ, ಮಹಿಳಾ ಮಂಡಳಿಗೆ ಸಭೆ ಮಾಡಲು ಅನುಕೂಲವಾಗಲಿದೆ ಎಂದು ಸಚಿವೆ ಹೆಬ್ಬಾಳಕರ ಹೇಳಿದರು.

ಕಾಮಗಾರಿ ಸ್ಥಳೀಯರ ಸಲಹೆಯಂತೆ ನಡೆಯಬೇಕು. ಅತ್ಯಂತ ಸುಂದರ ಭವನ ನಿರ್ಮಾಣವಾಗಬೇಕು. ಇದು ಬೇರೆ ಕಡೆ ಮಾಡುವುದಕ್ಕೆ ಮಾದರಿಯಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ ಅವರು, ಸುಳಗಾದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ವೇದಿಕೆಗೆ ಬಂದ ವ್ಯಕ್ತಿಯೋರ್ವ ಸಚಿವರ ನೆರವು ನೆನಪಿಸಿಕೊಂಡು, ನಿಮ್ಮ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತ ಬೊಮ್ಮಣ್ಣ ಪೋಟೆ ಎಂಬುವರು ವೇದಿಕೆಯಲ್ಲೇ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.