22ರಂದು ನನ್ನ ಕನಸು ನನ್ನ ಹೊಸದುರ್ಗದ ವಾರ್ಷಿಕೋತ್ಸವ

| Published : Jan 19 2024, 01:47 AM IST / Updated: Jan 19 2024, 01:48 AM IST

22ರಂದು ನನ್ನ ಕನಸು ನನ್ನ ಹೊಸದುರ್ಗದ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿಸ್ಮಯ ಗೋ ಮಂದಿರ ಟ್ರಸ್ಟ್‌ವತಿಯಿಂದ ನಡೆಸಲಾಗುತ್ತಿರುವ ನನ್ನ ಕನಸು ನನ್ನ ಹೊಸದುರ್ಗದ ವಾರ್ಷಿಕೋತ್ಸವ ಮತ್ತು ಅನ್ನದಾತರೊಂದಿಗೆ ಬೆಳದಿಂಗಳ ಸವಿಭೋಜನ ಕಾರ್ಯಕ್ರಮ ಜ.22ರಂದು ನಡೆಯಲಿದೆ.

ಹೊಸದುರ್ಗ: ವಿಸ್ಮಯ ಗೋ ಮಂದಿರ ಟ್ರಸ್ಟ್‌ವತಿಯಿಂದ ನಡೆಸಲಾಗುತ್ತಿರುವ ನನ್ನ ಕನಸು ನನ್ನ ಹೊಸದುರ್ಗದ ವಾರ್ಷಿಕೋತ್ಸವ ಮತ್ತು ಅನ್ನದಾತರೊಂದಿಗೆ ಬೆಳದಿಂಗಳ ಸವಿಭೋಜನ ಕಾರ್ಯಕ್ರಮ ಜ.22ರಂದು ಸೋಮವಾರ ತಾಲೂಕಿನ ಕೇಶವಪುರ (ಹಳೆ ಮಳಲಿ) ಗ್ರಾಮದಲ್ಲಿ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬ್ರಹ್ಮವಿದ್ಯಾ ನಗರದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಚಗಿರಿ ಕುಂಚಿಟಿಗ ಮಠದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಾವಯವ ಕೃಷಿ ಸಾವಿಲ್ಲದ ಕೃಷಿ, ಸಮಾಜ ಹಾಗೂ ಜನರ ಆರೋಗ್ಯ ಕಾಪಾಡಬೇಕು. ಭೂ ತಾಯಿಗೆ ಮನುಕುಲ ಮಾಡಿರುವ ಹಿಂಸೆಯ ಫಲ ಇಂದು ಅನುಭವಿಸುತ್ತಿದ್ದೇವೆ. ಮುಂದಿನ ಪೀಳಿಗೆಯೂ ಸಹ ಇದನ್ನು ಅನುಭವಿಸಿದಂತೆ ತಡೆಯಲು ಸಾವಯವ ಕೃಷಿ ಕಡೆ ರೈತರನ್ನು ತರಬೇಕಿದೆ ಎಂದರು.

ವಿಸ್ಮಯ ಟ್ರಸ್ಟ್ ಮುಂದಿನ 5 ವರ್ಷಗಳಲ್ಲಿ ರೈತರಿಗೆ ಸಾವಯವ ಕೃಷಿ ಮಹತ್ವ ತಿಳಿಸಿ ಸಾವಿಲ್ಲದ ಸಾವಯವ ಕೃಷಿಯೊಂದಿಗೆ ಆಹಾರ ಪದಾರ್ಥಗಳನ್ನು ರೈತರಿಂದಲೇ ಬೆಳೆಸಿ ರೈತ ಮಹಿಳೆಯರಿಂದಲೇ ಸಂಸ್ಕರಿಸಿ ರೈತರ ಮಕ್ಕಳಿಂದ ರಾಜ್ಯದಾದ್ಯಂತ ಗ್ರಾಹಕರಿಗೆ ತಲುಪಿಸುವ ಕೆಲಸ ನಡೆಸುತ್ತಿದೆ. ಇದಕ್ಕೆ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

ಇಂದಿನ ಸರ್ಕಾರಗಳು ಕಿವುಡಾಗಿವೆ. ಅವರದೇ ಆದ ದಾರಿಯಲ್ಲಿ ಹೋಗುತ್ತಿವೆ. ಸರ್ಕಾರಗಳಿಂದ ರೈತರಿಗೆ ಸರಿಯಾದ ಮಾರುಕಟ್ಟೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಟ್ರಸ್ಟ್ ಮೂಲಕ ರೈತರಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ಮಾಡುತಿದ್ದೇವೆ. ಒಂದೇ ಬಾರಿ ಎಲ್ಲವೂ ಆಗುವುದಿಲ್ಲ. ಅಂತ ಹಂತವಾಗಿ ನೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಮೂಲಭೂತ ಸೌಕರ್ಯ ಸ್ವಚ್ಛತೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಗುರಿ ಗೊಂದಲಾಗಿದೆ ಎಂದರು.

ವಿಸ್ಮಯ ಗೋ ಮಂದಿರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ, ಅನಂತಜಿ ಮಾತನಾಡಿ, ನನ್ನ ಕನಸು ನನ್ನ ಹೊಸದುರ್ಗದ ಪಂಚವಾರ್ಷಿಕ ಯೋಜನೆ ಪ್ರಾರಂಭಗೊಂಡು ಜನವರಿ 22ಕ್ಕೆ ಒಂದು ವರ್ಷ ಪೂರ್ಣಗೊಳ್ಳುವುದರಿಂದ ಅದರ ಸವಿ ನೆನಪಿಗಾಗಿ ಗೋಶಾಲೆಯನ್ನು ಪ್ರಾರಂಭಿಸುತ್ತಿದ್ದೇವೆ. 108 ಹಸುಗಳನ್ನು ಈಗಾಗಲೇ ದಾನಿಗಳು ಕೊಡಲು ಮುಂದೆ ಬಂದಿದ್ದು 22ರಂದು 25 ಹಸುಗಳನ್ನು ಗೋಶಾಲೆಗೆ ಬರಲಿವೆ ಎಂದರು.

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ ಕೃಷಿಯನ್ನು ಖುಷಿಗಾಗಿ ಮಾಡಬೇಕು ಕಾಸಿಗಾಗಿ ಮಾಡಿದರೆ ಸಾವಯವ ಕೃಷಿ ಯಶಸ್ಸು ಸಾಧಿಸುವುದು ಕಡಿಮೆ. ಇಂದು ಕೃಷಿ ಸರಳವಾಗಿರುವ ಕ್ಷೇತ್ರವಾಗಿಲ್ಲ ಎಂದರು.

ಸಭೆಯಲ್ಲಿ ಪ್ರಶ್ನ ಅಧ್ಯಕ್ಷ ಬಿವಿ ಲವಕುಮಾರ್ ಉಪಾಧ್ಯಕ್ಷ ಸುನಿಲ್ ಕುಮಾರ್, ಕಾರ್ಯದರ್ಶಿ ತೀರ್ಥಪ್ಪ ಸೇರಿದಂತೆ ಪ್ರಶ್ನೆ ಸದಸ್ಯರುಗಳು ಹಾಜರಿದ್ದರು.