ಕನ್ನಡಪ್ರಭ ವಾರ್ತೆ ಹಾಸನ

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರ ಸರ್ಕಾರದ ಅಧೀನದ ನ್ಯೂ ಮಿನರ್ವ ಮಿಲ್‌ನ ಖಾಯಂ ಕಾರ್ಮಿಕ ಎಚ್. ಜಿ. ಮಂಜು ೪೩ ವರ್ಷ, ಹಾಸನ ತಾಲೂಕಿನ ಕೊಕ್ಕನಘಟ್ಟದ ತಮ್ಮ ನಿವಾಸದಲ್ಲಿ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಾವನ್ನಪ್ಪಿದ್ದು, ಕಂಪನಿಯು ಹಲವು ತಿಂಗಳುಗಳಿಂದ ವೇತನ ಪಾವತಿ ಮಾಡದ ಕಾರಣ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂ ಮಿನರ್ವ ಮಿಲ್ ಕಾರ್ಮಿಕ ಸಂಘಟನೆ ಆರೋಪಿಸಿದೆ.ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಧು ಬಿ. ಎಂ. ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಮಂಜು ಎಚ್. ಜಿ. ಕಳೆದ ಸುಮಾರು ಹತ್ತು ವರ್ಷಗಳಿಂದ ನ್ಯೂ ಮಿನರ್ವ ಮಿಲ್‌ನಲ್ಲಿ ಖಾಯಂ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜುಲೈ ೧೨ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅವರು ಪತ್ನಿ, ಒಂದು ಮಗು ಹಾಗೂ ವಯೋವೃದ್ಧ ತಂದೆತಾಯಿಯನ್ನು ಅಗಲಿದ್ದು, ಕುಟುಂಬ ಈಗ ತೀವ್ರ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದ್ದಾರೆ. ೨೦೨೦ರಿಂದ ನ್ಯೂ ಮಿನರ್ವ ಮಿಲ್‌ನ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಅಲ್ಲಿನ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಪಾವತಿಸಿಲ್ಲ. ಅಲ್ಲದೆ, ಬೇರೆಡೆ ಉದ್ಯೋಗ ಹುಡುಕಿಕೊಳ್ಳಲು ಸಹ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಮಿಕರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ಯೂನಿಯನ್‌ನಿಂದ ದೂರಿದ್ದಾರೆ.ಕಳೆದ ಸುಮಾರು ೧೫ ತಿಂಗಳುಗಳಿಂದ ಒಂದು ರುಪಾಯಿಯೂ ವೇತನ ಸಿಗದ ಕಾರಣ ಅನೇಕ ಕಾರ್ಮಿಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಮಂಜು ಎಚ್. ಜಿ. ಅವರೂ ಇದೇ ಸಂಕಷ್ಟದಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಈ ದುರಂತಕ್ಕೆ ಕಂಪನಿಯ ಆಡಳಿತವೇ ನೇರ ಹೊಣೆಗಾರಿಕೆ ವಹಿಸಬೇಕು ಎಂದು ಯೂನಿಯನ್ ಒತ್ತಾಯಿಸಿದೆ. ಮೃತರ ಕುಟುಂಬಕ್ಕೆ ಸೂಕ್ತ ಮತ್ತು ನ್ಯಾಯಯುತ ಪರಿಹಾರ ನೀಡುವುದರ ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಕಲ್ಪಿಸಬೇಕು. ಈ ಮೂಲಕ ಕುಟುಂಬದ ಜೀವನೋಪಾಯಕ್ಕೆ ಭದ್ರತೆ ಒದಗಿಸಬೇಕು ಎಂದು ಯೂನಿಯನ್ ಆಗ್ರಹಿಸಿದ್ದಾರೆ. ಕಂಪನಿಯು ಮಾನವೀಯತೆ ಮೆರೆದು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವ ಉದ್ದೇಶದಿಂದ ನ್ಯೂ ಮಿನರ್ವ ಮಿಲ್ ವರ್ಕರ್ಸ್‌ ಯೂನಿಯನ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಯೂನಿಯನ್ ಮೂಲಕ ಎಚ್ಚರಿಕೆ ನೀಡಿದರು.