ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಕಟ್ಟಡ ಭಾನುವಾರ ಸಂಪೂರ್ಣ ಕುಸಿದು ಬಿದ್ದಿದ್ದು, ಕಚೇರಿ ಆರಂಭಕ್ಕೂ ಮುನ್ನವೇ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ಭಾನುವಾರ ಸಂಪೂರ್ಣ ಕುಸಿದು ಬಿದ್ದಿದ್ದು, ಕಚೇರಿ ಆರಂಭಕ್ಕೂ ಮುನ್ನವೇ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ಆದಂ ಎಂಬುವವರು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅಪಾಯವಿದೆ ಎಂದು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಶನಿವಾರ ಸಂಜೆ ಕಚೇರಿಯ ಪ್ರಮುಖ ಕಡತಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಭಾನುವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿಯಲಾರಂಭಿಸಿದ್ದು, ಸಿಬ್ಬಂದಿ ಮತ್ತಷ್ಟು ಎಚ್ಚರಿಕೆಯಿಂದ ಕಚೇರಿಯನ್ನು ತೆರೆಯದೆ ಇರಲು ನಿರ್ಧರಿಸಿದ್ದರು. ಬಳಿಕ ಬೆಳಗಿನ ಜಾವ ಕಟ್ಟಡ ಹಂತಹಂತವಾಗಿ ಸಂಪೂರ್ಣ ನೆಲಸಮವಾಗಿದೆ.

ಕಚೇರಿ ಆರಂಭವಾಗುವ ಮುನ್ನವೇ ಕಟ್ಟಡ ಕುಸಿದಿರುವುದು ಹಾಗೂ ಟೀ ಅಂಗಡಿಯ ನೀಡಿದ ಮುನ್ನೆಚ್ಚರಿಕೆಯಿಂದ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ 30 ವರ್ಷಗಳಿಂದ ಕಾಫಿ, ಟೀ ಅಂಗಡಿ ನಡೆಸುತ್ತಿರುವ ಆದಮ್ ಅವರು ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಟೀ ಹಾಗೂ ಕಾಫಿ ಪೂರೈಸುತ್ತಾ ಬಂದಿದ್ದಾರೆ. ಕಟ್ಟಡದ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಅವರು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಎಚ್ಚರಿಕೆ ನೀಡಿದರು. ಇದರ ಪರಿಣಾಮವಾಗಿ ಏಳು ಸಿಬ್ಬಂದಿಯ ಜೀವಗಳೊಂದಿಗೆ ಕಚೇರಿಯಲ್ಲಿದ್ದ ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಉಳಿದವು.