ಕನ್ನಡಪ್ರಭ ವಾರ್ತೆ ಹುಮನಾಬಾದ್
ಬರವನ್ನು ಸಮರ್ಥವಾಗಿ ಎದುರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರು. ಅನುದಾನ ಮಂಜೂರು ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದರು.ಅವರು ಬೀದರ್ದಿಂದ ಕಲಬುರಗಿ ತೆರಳುವಾಗ ಪಟ್ಟಣದ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಗೃಹ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿ ಗಳಿಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬರಗಾಲ ಘೋಷಣೆಯನ್ನು ಮಾನದಂಡಗಳನ್ನು ಅನುಸರಿಸಿ ಬರ ಪ್ರದೇಶ ಅಧ್ಯಯನ ಮಾಡಿದ ಬಳಿಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಸೇರಿದಂತೆ ಜಿಲ್ಲಾ ಮತ್ತು ತಾಪಂ ಚುನಾವಣೆಗಳನ್ನು ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಜರುಗಲಿದೆ. ಕಾರ್ಯಕರ್ತರು ನಿರಾಶೆಗೊಳ್ಳದೆ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಕರೆ ನೀಡಿದರು.ಬಿಜೆಪಿ SIR ಮೂಲಕ ಮತದಾರ ಹಕ್ಕನ್ನು ಕಸಿದುಕೊಳ್ಳಬೇಕೆಂದು ಹೊರಟಿದೆ. ನಾವು ಅರ್ಹರಿಗೆ ಮತದಾನದ ಹಕ್ಕನ್ನು ಕೊಡಿಸಬೇಕೆಂದು ಹೊರಟಿದ್ದೇವೆ. ಬಿಜೆಪಿಯವರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶಾಸಕರಿಂದ ರಾಸಾಯನಿಕ ಕಾರ್ಖಾನೆ ಮುಚ್ಚಿಸುವ ಹೇಳಿಕೆ ಎಲ್ಲಿ ಹೋಗಿದೆ ?
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಶಾಸಕರು ವಿಷಪೂರಿತ ರಾಸಾಯನಿಕ ಕಾರ್ಖಾನೆಗಳನ್ನು ಮುಚ್ಚಿಸುವುದಾಗಿ ನೀಡಿದ್ದ ಹೇಳಿಕೆ ಈಗ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.
ಎಲ್ಲಿ ಮರೆಯಾಗಿದ್ದಾರೆ ಹುಮನಾಬಾದ್ ಸಚಿವರು, ಅಭಿವೃದ್ಧಿ ಕುಂಠಿತ :ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಅಕ್ರಮ ಅಕ್ಕಿ ಮಾರಾಟ ಜೊರಾಗಿದೆ. ಈ ಕುರಿತು ಕಡಿವಾಣ ಹಾಕಲು ಯಾಕೆ ಮುಂದಾಗುತ್ತಿಲ್ಲ. ಕೋಟ್ಯಂತರ ವೆಚ್ಛದ ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಲಾದ ಪೌರಭವನ, ಈ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಿರ್ಮಿಸಿದ ವಿಜ್ಞಾನ ಕೇಂದ್ರ ಉದ್ಘಾಟನೆ ಮಾಡಲು ಯಾಕೆ ಮುಂದಾಗುತ್ತಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ವಿರುದ್ಧ ಮಾಜಿ ಸಚಿವ ರಾಜಶೇಖರ ಪಾಟೀಲ್ ಗುಡುಗಿದರು.
ಸರ್ಕಾರದ ಅನುದಾನದಲ್ಲಿ ಖೇರ್ಡಾ (ಬಿ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಾಲಾಜಿ ಮಂದಿರ ಅಡಿಗಲ್ಲು ಸಮಾರಂಭಕ್ಕೆ ಕ್ಷೇತ್ರದ ಜನಪ್ರತಿನಿಧಿ ಗಳನ್ನು ಆಹ್ವಾನಿಸದೇ ಮಾಡಿರುವುದು ಸರಿಯಲ್ಲ ಎಂದರು.ಬರುವ ದಿನಗಳಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳಿವೆ. ವಿಧಾನ ಸಭೆ ಚುನಾವಣೆ ಸಹಿತ ಒಂದು ವರ್ಷ ಹತ್ತು ತಿಂಗಳು ಮಾತ್ರ ಉಳಿದಿದೆ. ಜನರು ಇವರ ನಡುವಳಿಕೆ ಗಮನಿಸುತಿದ್ದಾರೆ. ಅವಕಾಶ ಸಿಕ್ಕಿದೆ, ದ್ವೇಷದ ರಾಜಕೀಯ ಬಿಟ್ಟು ಎಲ್ಲರನ್ನು ಕರೆಯುವ ಮೂಲಕ ಸಹಕಾರ ಪಡೆದುಕೊಂಡು ಕ್ಷೇತ್ರ ಅಭಿವೃದ್ಧಿಯ ಕಡೆ ಗಮನ ಹರಿಸಲಿ. ಅದಕ್ಕೆ ನಮ್ಮ ಸಹಕಾರವು ಇದೆ. ಅಭಿವೃದ್ದಿ ವಿಷಯದಲ್ಲಿ ನಾವು ಯಾರ ವಿರುದ್ಧವೂ ಇಲ್ಲ ಎಂದು ರಾಜಶೇಖರ ಪಾಟೀಲ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಉದ್ಯಮಿ ಧನರಾಜ ತಾಳಂಪಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ ಮಿಯ್ಯಾ, ಕಂಟೆಪ್ಪ ದಾನಾ, ಉಮೇಶ ಜಂಬಗಿ, ಸತೀಷ ರಾಂಪೂರೆ, ಓಂಕಾರ ತುಂಬಾ, ಅಶೋಕ ಚಳಕಾಪೂರೆ, ಮಹೇಶ ಅಗಡಿ, ಅಶೋಕ ಸೊಂಡೆ, ದತ್ತಕುಮಾರ ಚಿದ್ರಿ ಸೇರಿದಂತೆ ಅನೇಕರಿದ್ದರು.