ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ ಅಭಿಮತ
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯ-ಕೇಂದ್ರ ಸರ್ಕಾರಗಳ ಜನಪ್ರಿಯವಾದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಎನ್.ಜಿ.ಒಗಳ ಭಾಗವಹಿಸುವಿಕೆ ಅತ್ಯಂತ ಅವಶ್ಯಕ ಎಂದು ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.ನಗರದಲ್ಲಿ ಜಿಪಂ, ರೀಚಾ ಎನ್.ಜಿ.ಒ ಸಂಸ್ಥೆಯ ನೋಕಿಯಾ ಕಂಪನಿಯಿಂದ ಪಾಲುದಾರ ದೃಷ್ಟಿಕೋನ ಮತ್ತು ಸಾಮರ್ಥ್ಯ ನಿರ್ಮಾಣದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳ ಕಾರ್ಯಕ್ರಮ ಕಾರ್ಯರೂಪಕ್ಕೆ ತರಲು ಸರ್ಕಾರ ಮತ್ತು ಅಧಿಕಾರಿಗಳಿಂದ ಅಷ್ಟೇ ಸಾಧ್ಯವಾಗದ ಸಂದರ್ಭದಲ್ಲಿ ಇಂತಹ ಖಾಸಗಿ ಕಂಪನಿಗಳು, ಎನ್.ಜಿ.ಒ ಹಾಗೂ ಸಮಾಜದ ಸಹಕಾರ ಹಾಗೂ ಬೆಂಬಲ ಮುಖ್ಯವಾಗಿದೆ. ಹಾಗಾದಾಗ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ತಲುಪಿಸಬಹುದು. ಇದಕ್ಕಾಗಿ ನೀವು ನಮ್ಮೊಂದಿಗೆ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ರೀಚಾ ಎನ್.ಜಿ.ಒ ಸಂಸ್ಥೆಯಿಂದ ಸುಮಾರು ೧೪ ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಸ್ಮಾರ್ಟ್ಪುರ್ ಕಾರ್ಯಕ್ರಮದಡಿ ಸಂಸ್ಥೆಯಿಂದ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ಮೂಲಕ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ಕೊಂಡಿಯಾಗಿ ಕೆಲಸ ಮಾಡಲಿ. ಮುಂದೆ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆ ನಿರ್ವಹಿಸುವಂತಾಗಲಿ ಆಶಿಸಿದರು.ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಮಾತನಾಡಿ, ರಿಚಾ ಸಂಸ್ಥೆ ಪ್ರಮುಖವಾಗಿ ಜೀವನೋಪಾಯ, ಇ- ಆಡಳಿತ, ಆರ್ಥಿಕ ಸೇರ್ಪಡೆ, ಶಿಕ್ಷಣ ಮತ್ತು ಆರೋಗ್ಯ, ಪರಿಸರ ಸ್ನೇಹಿಯ ಜೊತೆಗೆ ಬಡವರಿಗೆ ಸೌಲಭ್ಯದ ಕೆಲಸಗಳಿಗೆ ಒತ್ತು ನೀಡಿದ್ದು ಜಿಲ್ಲೆಯಲ್ಲಿ ಹಿಂದುಳಿದ ೪೦ ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ೧೪ ಗ್ರಾಪಂಗಳಲ್ಲಿ ನಮ್ಮ ಚಟುವಟಿಕೆಗಳು ನಡೆಯುತ್ತಿವೆ. ಉಳಿದ ೨೬ ಪಂಚಾಯತಿಗಳಲ್ಲಿ ಆದಷ್ಟು ಬೇಗ ಚಟುವಟಿಕೆಗಳನ್ನು ಪ್ರಾರಂಭಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸುವ ಮತ್ತು ಮಾಹಿತಿಯ ಅರಿವು ನೀಡುವ ಕೆಲಸವಾಗಲಿ ಎಂದರು.ರೀಚಾ ಸಂಸ್ಥೆಯ ಕಾರ್ಯಾಚರಣೆ ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಶಜಾದ್ ನಗರ, ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಿಲಾಂಬರಸನ್, ಯೋಜನಾ ಸಂಯೋಜಕ ಎಂ.ವಿ.ಚೇತನ್, ಕೆವಿಕೆ ವಿಜ್ಞಾನ ಸಂಸ್ಥೆಯ ಡಾ.ಅನಿಲ್, ಕೆನರಾ ಬ್ಯಾಂಕ್ ತರಬೇತಿದಾರ ವಿಜಯಕುಮಾರ್, ಸಂಸ್ಥೆಯ ಗಜೇಂದ್ರ, ಜಗನ್, ಕಂಗಾಂಡ್ಲಹಳ್ಳಿ ಪಿಡಿಒ ವೈಷ್ಣವಿ ಸಾಗರ್, ದೊಡ್ಡವಲಗಮಾದಿ ಪಿಡಿಒ ಸರಸ್ವತಿ ಇದ್ದರು.