ಕನ್ನಡಪ್ರಭವಾರ್ತೆ ಚಳ್ಳಕೆರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ರಘುಮೂರ್ತಿ ಅವರು ನಗರದಾದ್ಯಂತ ವಿವಿಧ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿದರು.

ನಗರದ ಬಳ್ಳಾರಿ ರಸ್ತೆಯಲ್ಲಿ ಯು.ಜಿ.ಡಿ. ಯೋಜನೆಗೆ ಚಾಲನೆ ನೀಡುವ ಮೂಲಕ ಭೂಮಿ ಪೂಜೆ ನೆರವೇರಿಸಿದರು. ರಾಜಕಾಲುವೆ ಅಭಿವೃದ್ಧಿ ಗೆ ಆದ್ಯತೆ ನೀಡಿರುವ ಶಾಸಕರು ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಹತ್ತಿರ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಮಹಿಳೆಯರು ಹಾಗೂ ಮಕ್ಕಳು ಅಂಗವಿಕಲರು ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳ ವಿತರಣೆಯನ್ನೂ ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಭವನದ ಹತ್ತಿರ ಮಾಡಿದರು.

ಕಾಮಗಾರಿಗಳ ಭೂಮಿ ಪೂಜೆಯ ನಂತರ ಚಳ್ಳಕೆರೆ ವಿವಿಧ ಇಲಾಖೆಗಳ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.


ಡಿ. ದೇವರಾಜ್ ಅರಸು ನಿಗಮದ ವತಿಯಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹೊಲಿಗೆ ಯಂತ್ರ ಹಾಗೂ ''''ಸ್ವಾವಲಂಬಿ ಸಾರಥಿ'''' ಯೋಜನೆಯಡಿ ಅರ್ಹರಿಗೆ ವಾಹನಗಳನ್ನು ವಿತರಿಸಲಾಯಿತು.

ವಿಕಲಚೇತನರ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಚೇತನರಿಗೆ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ಇದೇ ವೇದಿಕೆಯಲ್ಲಿ ವಿತರಣೆ ಮಾಡಲಾಯಿತು.

ಸೌಲಭ್ಯಗಳನ್ನು ವಿತರಿಸಿದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆಯರು ಸ್ವಾವಲಂಭಿ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಮಹಿಳೆಯರು ಸೇರಿದಂತೆ ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಜನರು ಸುಸ್ಥಿರ ಜೀವನಕ್ಕೆ ಅಣಿಯಾಗಬೇಕಿದೆ.

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನನಗೆ ಮೂರು ಬಾರಿ ಅವಕಾಶ ಮಾಡಿಕೊಟ್ಟೀದ್ದಿರಿ. ಇಂತಹ ಅವಕಾಶ ಕಲ್ಪಿಸಿದ ಜನತೆಗೆ ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಗರದಲ್ಲಿ ಯು.ಜಿ.ಡಿ ಸಮಸ್ಯೆ ಬಹಳ ದಿನಗಳಿಂದಲೂ ಇತ್ತು. ಇಂತಹ ಸಮಸ್ಯೆ ಬಗೆಹರಿಯಲು ಕಾಲ ಸನ್ನಿಹಿತವಾಗಿದೆ. ಇಡೀ ನಗರದಲ್ಲಿ ಯುಜಿಡಿ ಅಳವಡಿಸುವ ಮೂಲಕ ಸ್ವಚ್ಛ ನಗರಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತೆ ಡಾ. ನಾಗವೇಣಿ, ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ವೈಶಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಜಾನಾಯ್ಕ, ದೇವರಾಜ್ ಅರಸು ಅಭಿವೃದ್ಧಿ ನಿಗಮದ ಅಧಿಕಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಎಸ್. ಸೈಯದ್ , ಕೆಡಿಪಿ ಸದಸ್ಯ ಮೀರಾಸಾಬಿಹಳ್ಳಿ ರಂಗಸ್ವಾಮಿ, ಆರ್. ಪ್ರಸನ್ನಕುಮಾರ್, ಅತೀಕ್ ವುಲ್ ರೆಹಮಾನ್, ಸಿ.ಟಿ. ಶ್ರೀನಿವಾಸ್, ಮುಜೀಬುಲ್ಲಾ, ಚಳ್ಳಕೆರಪ್ಪ, ಹಳೇಟೌನ್ ವೀರಭದ್ರಿ, ನೆಮ್ಮದಿ ಕಾಂತರಾಜ್, ಸಿದ್ದಾಪುರ ಮಂಜುನಾಥ್, ಅನ್ವರ್ ಮಾಸ್ಟರ್, ಚೆನ್ನಗಾನಹಳ್ಳಿ ರುದ್ರಮುನಿ, ಕೆ.ವೀರಭದ್ರಯ್ಯ, ರಾಘವೇಂದ್ರ, ರಮೇಶ್ ಗೌಡ, ಪಾಲಯ್ಯ ಮುಂತಾದವರು ಇದ್ದರು.