ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ನಾಲೆಗೆ 3 ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಭದ್ರಾ ಅಚ್ಚುಕಟ್ಟಿಗೆ ಮಳೆಗಾಲದ ಬೆಳೆ, ತೋಟದ ಬೆಳೆಗಳಿಗೆ ಹಕ್ಕಿನ ನೀರು ಹರಿಸುವಂತೆ ಒತ್ತಾಯಿಸಿ, ಸೆ.15ರಂದು ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹೆದ್ದಾರಿ ತಡೆ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

- ಮೇಲ್ದಂಡೆಗೆ ನೀರನ್ನು ಹರಿಸಿ ಅಚ್ಚುಕಚ್ಚು ರೈತರ ಹಕ್ಕನ್ನು ವಂಚಿಸಿದ ಸರ್ಕಾರ: ರೇಣು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ನಾಲೆಗೆ 3 ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಭದ್ರಾ ಅಚ್ಚುಕಟ್ಟಿಗೆ ಮಳೆಗಾಲದ ಬೆಳೆ, ತೋಟದ ಬೆಳೆಗಳಿಗೆ ಹಕ್ಕಿನ ನೀರು ಹರಿಸುವಂತೆ ಒತ್ತಾಯಿಸಿ, ಸೆ.15ರಂದು ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹೆದ್ದಾರಿ ತಡೆ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ನಮ್ಮ ಹಕ್ಕಿನ ನೀರಿಗಾಗಿ ನಡೆಯುವ ಭದ್ರಾ ಅಚ್ಚುಕಟ್ಟು ರೈತರ ಪರ ಹೋರಾಟದಲ್ಲಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಪಾಲ್ಗೊಳ್ಳುವ ಮೂಲಕ ಭದ್ರಾ ನೀರಿಗಾಗಿ ನಡೆಯುವ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.

ಅಚ್ಚುಕಟ್ಟಿಗೆ ನೀಡಬೇಕಾದ ನೀರನ್ನು ಭದ್ರಾ ಮೇಲ್ದಂಡೆಯಡಿ ಚಿತ್ರದುರ್ಗ, ತುಮಕೂರು, ತರೀಕೆರೆ ಭಾಗಕ್ಕೆ ಯಾರನ್ನು ಕೇಳಿ ಒಯ್ದಿದ್ದಾರೆ? ಐಸಿಸಿ ಸಭೆಯನ್ನೇ ಮಾಡದೇ ಆದೇಶಿಸಿದವರು ಯಾರು? ಬತ್ತ ನಾಟಿ ಹಚ್ಚಲು ನೀರಿಲ್ಲವೆಂದು ಹೇಳಿ ಇಂತಹ ಬರಗಾಲದಲ್ಲೂ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಟ್ಟು, ಅಚ್ಚುಕಟ್ಟು ರೈತರನ್ನು ಬಲಿ ಕೊಡಲು ಹೊರಟಿದ್ದೀರಾ? ತುಂಗಾ ನದಿಯಿಂದ ಭದ್ರಾಗೆ 17.41 ಟಿಎಂಸಿ ನೀರನ್ನು ಭದ್ರಾಗೆ ಲಿಫ್ಟ್‌ ಮಾಡಿ, ಅಲ್ಲಿಂದ ಮೇಲ್ದಂಡೆಗೆ ಕೊಡಬೇಕೆಂಬ ಅರಿವು ನಿಮಗಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಬಿ.ಎಸ್.ಜಗದೀಶ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಪ್ರವೀಣ ರಾವ್‌ ಜಾಧವ್, ರಾಜು ವೀರಣ್ಣ, ಕುರ್ಕಿ ರೇವಣ್ಣ, ದಿಗ್ಗೇನಹಳ್ಳಿ ನಾಗರಾಜ, ವಕೀಲ ವಿಶ್ವನಾಥ, ರಾಜು ಗೌಡ್ರು ಇತರರು ಇದ್ದರು.

- - -

(ಬಾಕ್ಸ್‌)

* 3 ಟಿಎಂಸಿ ನೀರು ಬಿಡೋದು ಒಳ್ಳೆಯದಲ್ಲ

ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಡ್ಯಾಂ ನಮ್ಮ ಭಾಗ್ಯವಿದಾತ. ಡ್ಯಾಂನಲ್ಲಿ ಸಣ್ಣ ಸೋರಿಕೆಯಾದರೂ, ಚಿಕ್ಕ ವ್ಯತ್ಯಾಸವಾದರೂ ಹೋರಾಡುತ್ತಾ ಬಂದವರು ನಾವು. ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರನ್ನು ಹರಿಸುತ್ತಿರುವುದು ಒಳ್ಳೆಯದಲ್ಲ. ಜಿಲ್ಲಾ ಸಚಿವರು ರೈತರಲ್ಲಿ ಡಿವೈಡ್ ಮಾಡಿಟ್ಟರು. ಹೀಗೆ ಮಾಡುವ ಬದಲು ಬೇಸಿಗೆ ಬೆಳೆಗೂ ನೀರು ಕೊಡಿಸುತ್ತೇನೆಂದು ಹೇಳಿದ್ದೆರೆ ಒಪ್ಪುತ್ತಿದ್ದೆವು. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸ್ವತಃ ಅಸಹಾಯಕರಾಗಿದ್ದು, ಜಿಲ್ಲಾ ಸಚಿವರ ಮೇಲೆ ನಂಬಿಕೆ ಇಲ್ಲ ಎಂದರು.

- - -

-13ಕೆಡಿವಿಜಿ4: ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.