ಸಾರಾಂಶ
ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ 4 ರೈಲು ಹಳಿ ತಪ್ಪಿದ ಘಟನೆಗಳಲ್ಲಿ ದುಷ್ಕೃತ್ಯದ ಸಂಚು!
ನವದೆಹಲಿ: ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ 4 ರೈಲು ಹಳಿ ತಪ್ಪಿದ ಘಟನೆಗಳಲ್ಲಿ ದುಷ್ಕೃತ್ಯದ ಸಂಚು ಏನಾದರೂ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ), ಪ್ರಾಥಮಿಕ ತನಿಖೆ ಆರಂಭಿಸಿದೆ. ಇತ್ತೀಚೆಗೆ ರೈಲು ಹಳಿ ತಪ್ಪಿಸಿದ, ತಪ್ಪಿಸುವ ಯತ್ನದ ಹಲವು ಘಟನೆಗಳು ನಡೆದಿದ್ದವಾದರೂ, ಈ ಪೈಕಿ 4 ಪ್ರಕರಣಗಳು ಹೆಚ್ಚು ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅದರ ಮೇಲೆ ಎನ್ಐಎ ನಿಗಾ ವಹಿಸಿದೆ. ಆದರೆ ಅಂಥ ಅನುಮಾನ ದೃಢಪಡಿಸುವ ಯಾವುದೇ ಖಚಿತ ಸಾಕ್ಷ್ಯಗಳು ಇದುವರೆಗೂ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
==ಇಂಟರ್ಲಾಕ್ ಪಾಯಿಂಟ್, ಕ್ರಾಸಿಂಗ್ ಪರಿಶೀಲನೆಗೆ ರೈಲ್ವೆ 15 ದಿನ ಅಭಿಯಾನ
ನವದೆಹಲಿ: ಇತ್ತೀಚೆಗೆ ದೇಶದ ಹಲವು ಕಡೆ ರೈಲುಗಳು ಸಿಗ್ನಲ್ ಸಮಸ್ಯೆಯಿಂದ ಹಳಿ ತಪ್ಪಿದ ಘಟನೆ ನಡೆದ ಬೆನ್ನಲ್ಲೇ, ದೇಶವ್ಯಾಪಿ ಇಂಟರ್ ಲಾಕಿಂಗ್ ಪಾಯಿಂಟ್ ಮತ್ತು ಕ್ರಾಸಿಂಗ್ಗಳನ್ನು ಪರಿಶೀಲಿಸಲು 15 ದಿನಗಳ ವಿಶೇಷ ಅಭಿಯಾನ ನಡೆಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.ಈ ಕುರಿತು ಎಲ್ಲಾ ವಲಯಗಳಿಗೂ ಸುತ್ತೋಲೆ ರವಾನಿಸಿರುವ ರೈಲ್ವೆ ಮಂಡಳಿ, ‘ಕಳೆದ 3 ವರ್ಷಗಳಲ್ಲಿ ನಿಮ್ಮ ವಲಯದಲ್ಲಿ ನಡೆದ ಇಂಟರ್ಸೆಕ್ಷನ್ಗಳಲ್ಲಿ ನಡೆದ ಹಳಿ ತಪ್ಪುವ ಘಟನೆ ಕುರಿತು ಆಳವಾದ ವಿಶ್ಲೇಷಣೆ ಮಾಡಿ, ಯಾವುದಾದರೂ ಇಂಟರ್ಲಾಕ್ ಪಾಯಿಂಟ್ಗಳಲ್ಲಿ ವಿಶೇಷ ಮುತುವರ್ಜಿ ಅವಶ್ಯಕತೆ ಇದೆಯೇ ಎಂದು ಪರಿಶೀಲಿಸಿ, ಅದಕ್ಕೆ ಬೇಕಾದ ಉಪಕರಣಗಳ ಲಭ್ಯತೆ ಖಚಿತಪಡಿಸಿಕೊಳ್ಳಿ, ಜೊತೆಗೆ ಇತ್ತೀಚೆಗೆ ಪೂರೈಸಲಾದ ಟಂಗ್ ರೇಲ್ಸ್ ಮತ್ತು ಕ್ರಾಂಸಿಂಗ್ ಅನ್ನು ಪರಿಶೀಲಿಸಿ’ ಎಂದು ಸೂಚಿಸಿದೆ.