ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿದೆ ನಿಡಗುಂದಿ

| Published : Sep 11 2024, 01:09 AM IST

ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿದೆ ನಿಡಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಿಡಗುಂದಿ: ಮನಸಿಟ್ಟು ಕೆಲಸ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಕ್ಷೇತ್ರ ಸೇರಿದಂತೆ ನಿಡಗುಂದಿ ಪಟ್ಟಣ ಮಾದರಿ ಪಟ್ಟಣವಾಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದಲ್ಲಿ ಪಪಂನಿಂದ ಹಮ್ಮಿಕೊಂಡಿದ್ದ ವಿವಿಧ ವಾರ್ಡ್‌ಗಳಲ್ಲಿ ಸಿಸಿರಸ್ತೆ, ಚರಂಡಿ ಹಾಗೂ ಕಾಟಾಪೂರ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮ ಚಾಲನೆ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸಿ ವೀರೇಶ ನಗರದ ಉದ್ಯಾನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ನಿಡಗುಂದಿ ವೇಗವಾಗಿ ಬೆಳೆಯುತ್ತಿದೆ.

ಕನ್ನಡಪ್ರಭ ವಾರ್ತೆ ನಿಡಗುಂದಿ:

ಮನಸಿಟ್ಟು ಕೆಲಸ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಕ್ಷೇತ್ರ ಸೇರಿದಂತೆ ನಿಡಗುಂದಿ ಪಟ್ಟಣ ಮಾದರಿ ಪಟ್ಟಣವಾಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಪಪಂನಿಂದ ಹಮ್ಮಿಕೊಂಡಿದ್ದ ವಿವಿಧ ವಾರ್ಡ್‌ಗಳಲ್ಲಿ ಸಿಸಿರಸ್ತೆ, ಚರಂಡಿ ಹಾಗೂ ಕಾಟಾಪೂರ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮ ಚಾಲನೆ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸಿ ವೀರೇಶ ನಗರದ ಉದ್ಯಾನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ನಿಡಗುಂದಿ ವೇಗವಾಗಿ ಬೆಳೆಯುತ್ತಿದೆ. ನಿಡಗುಂದಿ ತಾಲೂಕು ರಚನೆಗೆ ಬೇಕಾಗಿದ್ದ ಎಲ್ಲ ಅರ್ಹತೆ ಒದಗಿಸುವ ಮೂಲಕ ತಾಲೂಕು ಕೇಂದ್ರ ಮಾಡಲಾಗಿದೆ. ಜಲಧಾರೆ ಯೋಜನೆಯಡಿ ಆಲಮಟ್ಟಿಯಿಂದ ₹1300 ಕೋಟಿ ವೆಚ್ಚದಲ್ಲಿ ಇಂಡಿ, ವಿಜಯಪುರ, ಬಸವನಬಾಗೇವಾಡಿ ಸೇರಿ ಮೂರು ತಾಲೂಕಿಗೆ 2050ರವರೆಗೆ ನೀರಿನ ಸಮಸ್ಯೆ ಬರದಂತೆ ಮಾಡಲಾಗಿದೆ ಎಂದರು.

ಸದ್ಯದಲ್ಲೇ ಇಲ್ಲಿ ಮೆಗಾ ಮಾರುಕಟ್ಟೆ ಕಟ್ಟಡ ಆರಂಭವಾಗಲಿದ್ದು, ಮಾದರಿ ಪಟ್ಟಣಕ್ಕೆ ಮುಂಬರುವ ದಿನದಲ್ಲಿ ಅಗತ್ಯವಾದ ಎಲ್ಲ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.

ಶಿಕ್ಷಣ ಪ್ರೇಮಿ ಸಿದ್ಧಣ್ಣ ನಾಗಠಾಣ ಮಾತನಾಡಿ, ಕ್ಷೇತ್ರದಲ್ಲಿ ನಿಡಗುಂದಿ ವೇಗವಾಗಿ ಬೆಳೆಯುತ್ತಿದ್ದರೂ ಅನೇಕ ದಿನಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಸಚಿವ ಶಿವಾನಂದ ಪಾಟೀಲ ಅವರು, ಕ್ಷೇತ್ರಕ್ಕೆ ಆಯ್ಕೆಗೊಂಡ ಬಳಿಕ ಕ್ಷೇತ್ರದ ದಿಕ್ಕನ್ನೆ ಬದಲಿಸಿದ್ದಾರೆ. ಪಟ್ಟಣಕ್ಕೆ ತಾಲೂಕಿನ ಕಿರೀಟ ನೀಡಿದರು. ಸಿಮೆಂಟ್ ಮುಖವನ್ನೇ ನೋಡದ ರಸ್ತೆಗಳು ಸುಂದರ ರಸ್ತೆಗಳಾಗಿ ಕಂಡವು. ಕೋಟಿ ವೆಚ್ಚ ಅಭಿವೃದ್ಧಿ ಕಾಣದ ನಾವು ನೂರಾರು ಕೋಟಿ ಅಭಿವೃದ್ಧಿ ಕಾಣುವಂತಾಗಿದೆ. ಅಭಿವೃದ್ಧಿ ಮಂತ್ರದಿಂದ ಮತ ಕೇಳುವ ಸಚಿವರನ್ನು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ಕೋರಿದ ಎಲ್ಲ ಕಾರ್ಯಗಳನ್ನು ಸಚಿವ ಶಿವಾನಂದ ಪಾಟೀಲ ಅವರು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಕಸಾಪ ತಾಲೂಕಾಧ್ಯಕ್ಷ ಸಂಗಮೇಶ ಕೆಂಭಾವಿ, ಬಾಬು ಸಜ್ಜನ ಸೇರಿದಂತೆ ಇತರರು ಮಾತನಾಡಿದರು. ಪಪಂ ಅಧ್ಯಕ್ಷೆ ದೇಸಾಯಿ ಜಂಬಕ್ಕ ಲಕ್ಷ್ಮಣ ವಿಭೂತಿ, ಉಪಾಧ್ಯಕ್ಷೆ ಗೌರಮ್ಮ ಹುಗ್ಗಿ, ತಹಸೀಲ್ದಾರ್ ಎ.ಡಿ.ಅಮರವಾದಗಿ, ಮುಖಂಡರಾದ ಪರಶುರಾಮ ಕಾರಿ, ಶೇಖರ ರೂಡಗಿ, ಎಂ.ಎಂ.ಮುಲ್ಲಾ, ಮೌಲಾಸಾಬ ಅತ್ತಾರ, ಸಂಮೇಶ ಬಳಿಗಾರ, ಗಂಗಾಧರ ವಾರದ, ಬಸಯ್ಯ ಸಾಲಿಮಠ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾತಿ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಚಂದ್ರು ಹಳಮನಿ, ತಮ್ಮಣ್ಣ ಬಂಡಿವಡ್ಡರ, ಆಂಜನೇಯ ಮೋಪಗಾರ, ರವಿ, ಬೋವಿವಡ್ಡರ, ಪ.ಪಂ ಸದಸ್ಯರು ಸೇರಿದಂತೆ ಇತರರು ಇದ್ದರು.

ಪಪಂ ಸಿಬ್ಬಂದಿ ಹಾಗೂ ಹಾಲುಮತ ಸಮಾಜ ಬಾಂಧವರು, ವೀರೇಶ ನಗರ ಗಜಾನನ ಯುವಕ ಮಂಡಳದವರು ಸಚಿವ ಶಿವಾನಂದ ಪಾಟೀಲ ಅವರಿಗೆ ಸನ್ಮಾನಿಸಿದರು. ಪಟ್ಟಣದ ನಾಗರಿಕರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ----------

ಕೋಟ್‌

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ನೀಡುತ್ತಿರುವುದರಿಂದ ನಿಡಗುಂದಿಯಲ್ಲಿ ತಾಲೂಕು ಕಚೇರಿಗಳನ್ನು ತೆರೆಯಲು ವಿಳಂಭವಾಗಿದೆ. ಪಂಚ ಗ್ಯಾರಂಟಿ ಯೋಜನೆಯಿಂದ ವಾರ್ಷಿಕ ₹ 58 ಸಾವಿರ ಕೋಟಿ ಹಣ ಬರಿಸುವ ಜತೆಗೆ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಅಭಿವೃದ್ಧಿ ಸಹಿಸದ ವಿರೋಧಿಗಳು ಸಲ್ಲದ ಆರೋಪ ಮಾಡುತ್ತಿವೆ.

- ಶಿವಾನಂದ ಪಾಟೀಲ, ಕೃಷಿ ಮಾರುಕಟ್ಟೆ ಸಚಿವ