ಸಾರಾಂಶ
ನಿರ್ಮಲ ತುಂಗಭದ್ರಾ ಜನ ಜಾಗೃತಿ ಅಭಿಯಾನ ಅಂಗವಾಗಿ ನ.15ರಂದು ಬೆಳಗ್ಗೆ 10ರಿಂದ ಪ್ರಾರಂಭವಾಗುವ ಪಾದಯಾತ್ರೆಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಅಭಿಯಾನ ತಾಲೂಕು ಸಂಚಾಲಕ ವೀರೇಶ್ ಅಜ್ಜಣ್ಣನವರ್ ಹರಿಹರದಲ್ಲಿ ಹೇಳಿದ್ದಾರೆ.
ಹರಿಹರ: ನಿರ್ಮಲ ತುಂಗಭದ್ರಾ ಜನ ಜಾಗೃತಿ ಅಭಿಯಾನ ಅಂಗವಾಗಿ ನ.15ರಂದು ಬೆಳಗ್ಗೆ 10ರಿಂದ ಪ್ರಾರಂಭವಾಗುವ ಪಾದಯಾತ್ರೆಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಅಭಿಯಾನ ತಾಲೂಕು ಸಂಚಾಲಕ ವೀರೇಶ್ ಅಜ್ಜಣ್ಣನವರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.6ರಿಂದ ಶೃಂಗೇರಿಯಿಂದ ಆರಂಭವಾದ ನಿರ್ಮಲ ತುಂಗಭದ್ರಾ ಅಭಿಯಾನವು ಶಿವಮೊಗ್ಗ, ಭದ್ರಾವತಿ, ಹೊನ್ನಾಳ್ಳಿ ತಾಲೂಕಿನಲ್ಲಿ ಪಾದಯಾತ್ರೆ ಮುಗಿಸಿ ನ.13 ರಿಂದ 15ರವರೆಗೆ ಹರಿಹರ ತಾಲೂಕಿನಲ್ಲಿ ಸಂಚರಿಸಲಿದೆ ಎಂದರು.ಬೆಳಗ್ಗೆ 10ರಿಂದ ನಡೆಯುವ ಪಾದಯಾತ್ರೆಗೆ ಜಿಲ್ಲಾಧಿಕಾರಿ ಚಾಲನೆ ನೀಡಲಿದ್ದಾರೆ. ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಸಂಚರಿಸಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಗುವುದು. ಅನಂತರ ರಾಘವೇಂದ್ರ ಮಠದ ಸಮೀಪದ ನದಿಯ ದಡದಲ್ಲಿರುವ ತುಂಗಭದ್ರಾರತಿ ಕಾರಿಡಾರ್ವವರೆಗೆ ಪಾದಯಾತ್ರೆ ನಡೆಯಲಿದೆ ಎಂದರು.
ತುಂಗಭದ್ರಾರತಿ ಕಾರಿಡಾರ್ನಲ್ಲಿ ನಡೆಯುವ ಸಮಾರೋಪದ ಸಾನಿಧ್ಯವನ್ನು ವಚನಾನಂದ ಶ್ರೀ, ಕನಕ ಗುರು ಪೀಠದ ನಿರಂಜನಾನಂದಪುರಿ ಶ್ರೀ ವಹಿಸಲಿದ್ದಾರೆ. ಸಂಸದೆ ಡಾ. ಪ್ರಭಾ, ಶಾಸಕ ಹರೀಶ್, ಮಾಜಿ ಶಾಸಕ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಎಸ್ಪಿ ಉಮಾ ಪ್ರಶಾಂತ್ ಇನ್ನಿತರ ಮುಖಂಡರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ, ದಕ್ಷಿಣ ಭಾರತ ಸಂಯೋಜಕ ಸಿ.ಪಿ ಮಾಧವನ್, ಶಾಂತಕುಮಾರಿ, ಚಂದ್ರಶೇಖರ್ ಪೂಜಾರ್, ಕಂಚಿಕೇರಿ ಕರಿಬಸಪ್ಪ ಇತರರು ಇದ್ದರು.
- - --13ಎಚ್ಆರ್ಆರ್04: