ಅಭಿವೃದ್ಧಿಗಾಗಿ, ರಾಜಕೀಯ ಅಸ್ತಿತ್ವದ ಭೀತಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡುವ ಅವಶ್ಯಕತೆ ನನಗಿಲ್ಲ.

ಹಗರಿಬೊಮ್ಮನಹಳ್ಳಿ: ಅಭಿವೃದ್ಧಿಗಾಗಿ, ರಾಜಕೀಯ ಅಸ್ತಿತ್ವದ ಭೀತಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡುವ ಅವಶ್ಯಕತೆ ನನಗಿಲ್ಲ. ಮುಂದಿನ ಬಾರಿ ಎನ್‌ಡಿಎ ಅಭ್ಯರ್ಥಿಯಾಗಿ ನಾನೇ ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತೇನೆ ಎಂದು ಶಾಸಕ ನೇಮರಾಜ್ ನಾಯ್ಕ ಸ್ಪಷ್ಟಪಡಿಸಿದರು.

ಪಟ್ಟಣದ ಬಿಸಿಎಂ ವಸತಿ ನಿಲಯದ ಬಳಿ ಮುಖ್ಯಮಂತ್ರಿ ಮೂಲಸೌಕರ್ಯ (ಸಿಎಂಐಡಿಪಿ) ಯೋಜನೆಯ ₹೧೬೫ ಲಕ್ಷ ಅನುದಾನದಲ್ಲಿ ಹಗರಿಬೊಮ್ಮನಹಳ್ಳಿ ಕೆಚ್ಚಿನಬಂಡಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆಸಕ್ತಿ ವಹಿಸಿದ್ದರು. ಆದರೆ ಅಲ್ಲಿರುವ ನೀರಿನ ಲಭ್ಯತೆ, ಸಂಪದ್ಭರಿತ ತೋಟಗಳನ್ನು ಒಕ್ಕಲೆಬ್ಬಿಸುವ ಜೊತೆಗೆ ರೈತರ ಹಿತಾಸಕ್ತಿ ಪರಿಗಣಿಸಿ ಯೋಜನೆ ಜಾರಿಗೆ ಅವರು ಮುಂದುವರೆಯಲಿಲ್ಲ. ಪಕ್ಷ ಆಯೋಜಿಸಿರುವ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸಮಾವೇಶ ತಡೆ ಹಿಡಿಯುವ ದುರುದ್ದೇಶವಿಲ್ಲ:

ಕ್ಷೇತ್ರದಲ್ಲಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಆಯೋಜಿಸಲಾಗುವ ಯಾವುದೇ ಸಮಾವೇಶಗಳನ್ನು ತಡೆ ಹಿಡಿಯುವ ದುರುದ್ದೇಶ ತಮಗಿಲ್ಲ. ಈ ಕುರಿತಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಪೂರ್ವಗ್ರಹ ಪೀಡಿತ ಎಂದು ಕಿಡಿಕಾರಿದರು.

ಮೂರು ವರ್ಷಗಳ ಅವಧಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ₹೧೫೦ ಕೋಟಿ ಸೇರಿದಂತೆ ₹೮೦೦ ಕೋಟಿಗೂ ಹೆಚ್ಚು ಅನುದಾನ ಒದಗಿಸಿ ಕ್ಷೇತ್ರದ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಹಿಂದಿನ ೧೦ ವರ್ಷಗಳ ಅವಧಿಯಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿರಲಿಲ್ಲ ಎಂದು ಆರೋಪಿಸಿದ ಶಾಸಕರು, ಈಗ ರಸ್ತೆಗಳ ಅಭಿವೃದ್ಧಿಗೆ ₹೫೦೦ ಕೋಟಿಗೂ ಹೆಚ್ಚಿನ ಅನುದಾನದ ಅಗತ್ಯವಿದೆ. ನೂತನ ಮುಖ್ಯಮಂತ್ರಿ ಅನುದಾನ ಒದಗಿಸುವ ವಿಶ್ವಾಸವಿದೆ ಎಂದರು.

ನಂತರ ತಾಲೂಕಿನ ಉಲುವತ್ತಿ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಯೋಜನೆಯಡಿ ₹೫೦ ಲಕ್ಷ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ಟರು, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಕಾರ್ಯದರ್ಶಿ ಡಿಶ್ ಪಾಂಡುರಂಗ ನಾಯ್ಕ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ಚಿತವಾಡಗಿ ಪ್ರಕಾಶ್, ಪುರಸಭೆ ಸದಸ್ಯ ಜೋಗಿ ಹನಮಂತ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿ.ಎಚ್.ಸಿದ್ಧರಾಜ, ಬ್ಲಾಕ್‌ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಸೋಮಲಿಂಗಪ್ಪ, ದಲಿತ ಮುಖಂಡ ಕೆಚ್ಚಿನಬಂಡಿ ದುರುಗಪ್ಪ, ಪಿಡಬ್ಲುಡಿ ಎಇಇ ಸತೀಶ ನಾಯ್ಕ, ಗುತ್ತಿಗೆದಾರ ವಿ.ದೊಡ್ಡಬಸಪ್ಪ ಇದ್ದರು.