ಕುಷ್ಟಗಿ: ಮನುಷ್ಯನ ಜೀವನದಲ್ಲಿ ಸುಖ ಹಾಗೂ ದುಃಖದ ಅನುಭಗಳು ಬರುತ್ತಿದ್ದು, ಯಾವುದೇ ಅನುಭವ ಕಾಯಂ ಇರುವುದಿಲ್ಲ ಎಲ್ಲವನ್ನು ಅರಿತುಕೊಂಡು ಬದುಕಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗಲಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕಂದಕೂರು ಗ್ರಾಮದ ಶರಣಬಸವೇಶ್ವರ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಜೀವನದಲ್ಲಿ ಅನುಭವಗಳ ಪ್ರವಾಹ ಬಂದು ಹೋಗುತ್ತದೆ. ಬಡವ ಶ್ರೀಮಂತ,ಸುಖ ದುಃಖ,ಹಿತ ಅಹಿತ ಈ ಅನುಭವ ನಮ್ಮ ಪರಿಸ್ಥಿತಿಗನುಗುಣವಾಗಿ ಬಂದು ಹೋಗುತ್ತಿದ್ದು, ಯಾವ ಅನುಭವವೂ ಶಾಶ್ವತವಲ್ಲ ಆದಿ ಕಾಲದಿಂದ ಆಧುನಿಕ ಕಾಲದವರೆಗೂ ಮನುಷ್ಯನ ಬದುಕನ್ನು ಹೇಗೆ ಸಾಗಿಸಬೇಕು ಎಂಬ ಅರಿವನ್ನು ತಿಳಿದುಕೊಳ್ಳುವಲ್ಲಿಯೆ ಹಂಬಲಿಸುತ್ತಿದ್ದಾನೆ ಎಂದರು.

ಮನುಷ್ಯ ಬದುಕಲು ಬೇಕಿರುವದು ಅನ್ನ ಆಶ್ರಯ ಹಾಗೂ ಬಟ್ಟೆ ಈ ಎಲ್ಲವನ್ನು ಮೀರಿದ ಅರಿವು ತಿಳಿದುಕೊಂಡರೆ ಸಾಕು ಮನುಷ್ಯ ಸಂತೋಷ ಜೀವನ ನಡೆಸುತ್ತಾನೆ. ಹುಟ್ಟಿನಿಂದ ಸಾಯೋವರೆಗೂ ಈ ಅನುಭವ ಆಗುತ್ತಿದ್ದು, ಸುಖ ದುಃಖ ಅನುಭವ ಮಿಶ್ರಣ ಈ ಪ್ರಪಂಚದಲ್ಲಿದೆ ಎಂದು ತಿಳಿದು ಬದುಕುವ ಬದುಕುವ ಜ್ಞಾನವೇ ಜೀವನ ಎಂದ ಅವರು, ಜೀವನದಲ್ಲಿ ಸಂತೋಷದಿಂದ ಬದುಕಬೇಕಾದರೆ ಇದ್ದಂಗ ಇರಬೇಕು, ಇಲ್ಲದಂಗ ಇರಬೇಕು, ಭಗವಂತ ಕರೆದರೆ ಹೋಗುವಂಗ ಇರಬೇಕೆನ್ನುವುದು ಶರಣರ ಸಂತರ ಸಂದೇಶವಾಗಿದೆ ಎಂದರು.

ಮೆಚ್ಚಿ ಮಾತನಾಡಿದರೆ ಸಂತಸ ಚುಚ್ಚಿ ಮಾತನಾಡಿದರೆ ಮನಸ್ಸಿಗೆ ತಾಪವಾಗುವುದು ಸಹಜ ವ್ಯಕ್ತಿ ಮಾತನಾಡಿದ ವಿಷಯಗಳಿಂದ ದೂರವಾಗಬಹುದು. ಆದರೆ ಅವರಾಡಿದ ಮಾತಿನ ನೆನಪಿವಿನಿಂದ ದೂರವಾಗುವುದು ಸಾಧ್ಯವಿಲ್ಲ. ಮನುಷ್ಯನಿಗೆ ಹೆಚ್ಚು ತಾಪ ಮಾಡಿ ದುಃಖ ಕೊಟ್ಟಿದ್ದು, ವಸ್ತುಗಳಲ್ಲ ನೆನಪುಗಳಾಗಿವೆ. ಇವುಗಳಿಂದ ದೂರವಾಗಲು ಒಳ್ಳೆಯ ವಿಚಾರಗಳ ಜ್ಞಾನ ಅಗತ್ಯವಾಗಿದೆ ಎಂದ ಅವರು, ತಿಳಿಯದವರು ಆಡಿದ ಮಾತಿಗಿಂತ ತಿಳಿದವರು ಆಡಿದ ಮಾತು ಮನಸ್ಸಿಗೆ ಪೆಟ್ಟು ಕೊಡುತ್ತದೆ. ಆಡಿದ ಮಾತು, ನೋಡಿದ ರೂಪ ಇದರಿಂದ ದೂರವಾಗಿರಬೇಕೆನ್ನುವುದು ಸಂದೇಶವಾಗಿದೆ ಎಂದರು.


ಭಕ್ತಿಯ ಊರು ಕಂದಕೂರು: ಕಂದಕೂರು ಗ್ರಾಮದಲ್ಲಿ ಹಿರಿಯರು,ಯುವಕರು ಜಾತಿ, ಧರ್ಮ,ರಾಜಕಾರಣವಿಲ್ಲದೆ ಗ್ರಾಮದ ಹಿತಕ್ಕಾಗಿ ಶ್ರಮಿಸುತ್ತಿದ್ದು, ಗ್ರಾಮದಲ್ಲಿ ಭಕ್ತಿಯಿದ್ದು ಜಾತ್ರೆ ವಿವಾಹ ಮಹೋತ್ಸವ ವೈಭವದಿಂದ ನಡೆಯುತ್ತಿದೆ ಈ ಗ್ರಾಮದ ಬಗ್ಗೆ ಖುಷಿಯಿದೆ ಕೊಪ್ಪಳದಿಂದ ಕಂದಕೂರು ದೂರವಿರಬಹುದು ಆದರೆ ಗವಿಸಿದ್ದಪ್ಪ ಅಜ್ಜನ ಭಕ್ತಿಯಿಂದ ದೂರವಾಗಿಲ್ಲ.

ದೇವರು ಕೊಟ್ಟ ಈ ಅದ್ಭುತ ಜೀವನ ಉತ್ತಮ ವಿಚಾರ ಕೇಳುವ ಹೇಳುವ ಮೂಲಕ ದೇವರಿಗೆ ಪ್ರೀತಿಯಾಗಿ ಬದುಕು ನಡೆಸಬೇಕು ಸಂತಸದ ಜೀವನ ನಡೆಸಬೇಕು ಎಂದು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.