ಯುಕೆಪಿ ಯೋಜನೆಗೆ ಟ್ರಿಬುನಲ್ ಕೇಸ್ ಇದ್ದು, ಅದನ್ನು ಪ್ರಧಾನಿ ಮೋದಿ ನಾಲ್ಕು ರಾಜ್ಯದ ಸಿಎಂ ಅವರನ್ನು ಕರೆದು ಮಾತನಾಡಬೇಕು.
ಕುಕನೂರು: ರಾಜಕಾರಣಿಗಳು ಉದ್ರಿ ಭಾಷಣ ಮಾಡುವುದನ್ನು ಬಿಡಬೇಕು. ಅಭಿವೃದ್ಧಿ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಬೇಕು. ಖಾಲಿ ಭಾಷಣ ಮಾಡುವುಕ್ಕಾಗಿಯೇ ದ್ವೇಷ ಭಾಷಣ ವಿಧೇಯಕವನ್ನು ನಾನೇ ಮುಂದೆ ನಿಂತು ಮಂಡನೆ ಮಾಡಿಸಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಬನ್ನಿಕೊಪ್ಪ, ಸೋಂಪೂರು, ಮಾಳೆಕೊಪ್ಪ ಗ್ರಾಮದಲ್ಲಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದ್ವೇಷ ಭಾಷಣದ 6 ವಿಧೇಯಕ ಜಾರಿಗೆ ತರಲಾಗಿದೆ.ಎಂಎಲ್ಎ ಆದವರೂ ಅಭಿವೃದ್ಧಿ ಕಾರ್ಯಗಳಿಗಾಗಿ ಮಾತನಾಡಬೇಕು. ಭಾರತ ದೇಶಕ್ಕೆ ಮುಂದಿನ ದಿನದಲ್ಲಿ ಭವಿಷ್ಯವಿಲ್ಲ. ಇಂದಿನಿ ಸ್ಥಿತಿ ಬದಲಾವಣೆ ಆಗಬೇಕಿದೆ. ಧರ್ಮ, ಜಾತಿ ಮೇಲೆ ರಾಜಕಾರಣ ಸಾಗುತ್ತಿದೆ. ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯ ಆಗಬೇಕು. ವಿದೇಶಾಂಗ ನೀತಿ ಸಹ ಸರಿಯಾಗಬೇಕು ಎಂದರು.ಯುಕೆಪಿ ಯೋಜನೆಗೆ ಟ್ರಿಬುನಲ್ ಕೇಸ್ ಇದ್ದು, ಅದನ್ನು ಪ್ರಧಾನಿ ಮೋದಿ ನಾಲ್ಕು ರಾಜ್ಯದ ಸಿಎಂ ಅವರನ್ನು ಕರೆದು ಮಾತನಾಡಬೇಕು. ಸದ್ಯ ಆ ಯೋಜನೆ ಜಾರಿಗಾಗಿ ₹2 ಲಕ್ಷ ಕೋಟಿ ವ್ಯಯವಾಗುತ್ತದೆ. ಅಂತಹ ಸಮಸ್ಯೆ ಬಗೆಹರಿಯಬೇಕು. ನರೇಗಾ ಕಾಮಗಾರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯೆಂದು ಹೆಸರಿಡಲಾಗಿತ್ತು. ಮಹಾತ್ಮ ಗಾಂಧಿ ಒಬ್ಬರು ರಾಷ್ಟ್ರ ನಾಯಕರು. ಆದರೆ ಪ್ರಧಾನಿ ಆ ಹೆಸರು ಬದಲಾವಣೆ ಮಾಡಿದ್ದು ಖಂಡನೀಯ. ಇದರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಬೇಕು. ನರೇಗಾ ಯೋಜನೆ ವಿಸ್ತಾರ ಮಾಡಲಿ ಆದರೆ ಯೋಜನೆಯ ಹೆಸರು ಬದಲಾವಣೆ ಮಾಡಿ ಗಾಂಧೀಜಿ ಹೆಸರು ಕೈ ಬಿಟ್ಟಿರುವುದು ಸರಿಯಲ್ಲ ಎಂದರು.
ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದಲ್ಲಿ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಈ ಸಲದ ಬಜೆಟ್ ಗಾತ್ರ ₹4 ಲಕ್ಷ ಕೋಟಿಗೂ ಅಧಿಕ ಆಗಲಿದೆ. ಈ ಸಲ ಬಜೆಟಿನಲ್ಲಿ ರೈತರು ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುವ ಸುಳಿವು ನೀಡಿದರು. ಈ ಹಿಂದಿನ ಬಿಜೆಪಿ ಸರ್ಕಾರ ಅನುದಾನವಿಲ್ಲದೆ ಯೋಜನೆ ಘೋಷಿಸಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಹೊರೆಯಾಯಿತು ಎಂದರು.ಬನ್ನಿಕೊಪ್ಪದಲ್ಲಿ ಸ್ಮಾರಕ ಉದ್ಘಾಟನೆ:ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಸ್ವಾತಂತ್ರ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕ ಉದ್ಘಾಟನೆ ಮತ್ತು ₹5 ಕೋಟಿ ವೆಚ್ಚದ ಕವಲೂರು ಮಂಗಳೂರು ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬನ್ನಿಕೊಪ್ಪ ಗ್ರಾಮದಲ್ಲಿ ಸ್ಮಾರಕ ಉದ್ಘಾಟನೆ ಮಾಡಿರುವುದು ಸಂತಸದ ಸಂಗತಿ. ಬೇರೇ ಬೇರೆ ದೇಶದ ಜನ ನಮ್ಮ ದೇಶದ ಮೇಲೆ ದಾಳಿ ಮಾಡಿ ದೇಶದ ಸಂಪತ್ತು ಲೂಟಿಗೆ ಬಂದಾಗ ಅವರನ್ನು ದೇಶದಿಂದ ಹಿಮ್ಮೆಟ್ಟಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿದರು. ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪಿಸಿದರು. ನಂತರ ಗಾಂಧೀಜಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮೊದಲ ಅಧಿವೇಶನದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಬಗ್ಗೆ ಮಾತನಾಡಿದರು. ಸ್ಥಳೀಯವಾಗಿ ಅಳವಂಡಿ ಶಿವಮೂರ್ತಿ, ಹಾಗೂ ಬನ್ನಿಕೊಪ್ಪ ಗ್ರಾಮದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸಹ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಲಕ್ಷಾಂತರ ಜನರ ಹೋರಾಟದ ಫಲ ಸ್ವಾತಂತ್ರ್ಯ ಆಯಿತು. ನಿಜಾಮರ ಹಿಡಿತದಲ್ಲಿದ್ದ ಈ ಭಾಗದ ವಿಮೋಚನೆಗಾಗಿ ಸಹ ಸ್ಥಳೀಯರು ಹೋರಾಟ ಮಾಡಿದರು ಎಂದರು.
ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಸ್ಮಾರಕ ಉದ್ಘಾಟನೆ ವೇಳೆ ಇದ್ದರು.ಕಪ್ಪತ್ತಮಠದ ಶ್ರೀಗಳು, ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪೂರ, ತಹಸೀಲ್ದಾರ್ ಬಸವರಾದ ಬೆಣ್ಣೆ ಶಿರೂರು, ತಾಪಂ ಇಒ ಸಂತೋಷ ಬಿರಾದಾರ, ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್, ಕೆರಿಬಸಪ್ಪ ನಿಡಗುಂದಿ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಇಂಜಿನಿಯರ್ ಗಳಾದ ರಾಜಶೇಖರ್ ಮಳಿಮಠ, ಮಲ್ಲಿಕಾರ್ಜುನ, ಶಿವು, ಪ್ರಭಾರಿ ಬಿಇಒ ಅಶೋಕಗೌಡ್ರು, ದೇವಪ್ಪ ಅರಕೇರಿ, ಗೌರಮ್ಮ ನಾಗನೂರು, ಸಂಗಮೇಶ ಗುತ್ತಿ, ಬಸವಪ್ರಭು, ಹನುಮೇಶ ಕಡೆಮನಿ, ಅಶೋಕ ತೋಟದ, ಮಂಜುನಾಥ ಕಡೆಮನಿ, ಹಂಪಯ್ಯ, ಮಂಜುನಾಥ್ ಹಳ್ಳಿಕೇರಿ ಇತರರಿದ್ದರು.
ಅಭಿವೃದ್ಧಿ ಕಾರ್ಯ ನೋಡಿ ಬೇರೆ ಕ್ಷೇತ್ರಕ್ಕೆ ಆಹ್ವಾನಯಲಬುರ್ಗಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ನೋಡಿ ನನ್ನನ್ನು ಬೇರೆ ಕ್ಷೇತ್ರದವರು ಇಲ್ಲಿ ಚುನಾವಣೆ ನಿಲ್ಲಿ ಎಂದು ಕರೆಯುತ್ತಾರೆ. ಗದಗಿನ ತಿಮ್ಮಾಪುರ ಗ್ರಾಮದವರು, ಕೊಪ್ಪಳದ ಜನರು ಸಹ ಆಹ್ವಾನಿಸಿದ್ದಾರೆ. ಜನರಾಭಿವೃದ್ಧಿಗಾಗಿ ಒಂದು ಕ್ಷಣ ಸಹ ನನ್ನ ಕುಟುಂಬಕ್ಕೆ ಸಮಯ ಮೀಸಲಿಡದೆ 1985 ರಿಂದ ಕಾರ್ಯ ಮಾಡಿದ ಫಲ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ಆಗಿದೆ. ಸೋಂಪುರು ಹೈ ಸ್ಕೂಲ್ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ 28 ಲಕ್ಷ ಅನುದಾನ ನೀಡಿ ಆರು ತಿಂಗಳಾಯ್ತು ಆದರೆ ಜಾಗದ ಕೊರತೆ ಇದೆ. ಜಾಗ ನೀಡಿ ಕಟ್ಟಡ ಕಟ್ಟಿಕೊಳ್ಳಬೇಕು. ಒಂದು ಹೈಸ್ಕೂಲ್ ಗೆ ವರ್ಷಕ್ಕೆ ಸುಮಾರು 80 ಲಕ್ಷ ಶಿಕ್ಷಕರ ಪಗಾರ ನೀಡುತ್ತೇವೆ. ಅದರ ಸದ್ಭಳಕೆ ಆಗಬೇಕು ಎಂದರು.