ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪಟ್ಟಣದ ವೃತ್ತಗಳಲ್ಲಿ ಪುತ್ಥಳಿಗಳ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬಾರದು ಎಂದು ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿಯ ನಿರ್ದೇಶಕ ನಂಜುಂಡ ಮೈಮ್ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಪಟ್ಟಣದ ಪ್ರಮುಖ ಸರ್ಕಲ್ ಗಳಲ್ಲಿ ಜನಪ್ರಿಯ ನಾಯಕರ ಪುತ್ಥಳಿ ನಿರ್ಮಾಣ ಮಾಡುವ ಅಭಿಮಾನಿಗಳ ಸಮೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಟ್ಟಣದ ಕೆ.ಆರ್.ವೃತ್ತದಲ್ಲಿ ಕೃಷ್ಣರಾಜೇಂದ್ರ ಅವರ ಪುತ್ಥಳಿ, ಆಸ್ಪತ್ರೆ ವೃತ್ತದಲ್ಲಿ ಶ್ರೀಕಂಠಯ್ಯನವರ ಪುತ್ಥಳಿ, ಮೈಸೂರು ವೃತ್ತದಲ್ಲಿ ಕುವೆಂಪುರವರ ಪ್ರತಿಮೆ ನಿರ್ಮಾಣಕ್ಕೆ ಸಾಹಿತ್ಯಾಸಕ್ತರು ಮುಂದಾಗಿದ್ದಾರೆ. ಗದ್ದೆ ಹಳ್ಳದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ವೃತದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ಥಳಿ ನಿರ್ಮಾಣಕ್ಕೂ ಅಭಿಮಾನಿಗಳು ಉತ್ಸುಕರಾಗಿದ್ದು, ಪಟ್ಟಣ ಗುರುಭವನದ ಬಳಿ ಕೆಂಪೇಗೌಡರು ವೃತ್ತದಲ್ಲಿ ಅಶ್ವರೂಢ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಸಭೆಯಲ್ಲಿ ಶಾಸಕರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಜುಲೈ ೫ ರಂದು ನವೋದಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಸಭೆ ಕರೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪುತ್ಥಳಿ ನಿರ್ಮಾಣಕ್ಕೂ ಅವರ ಅಭಿಮಾನಿಗಳು ತಯಾರಿಯಲ್ಲಿದ್ದು ಪಟ್ಟಣದ ಎಲ್ಲಾ ಪ್ರಮುಖ ವೃತ್ತಗಳಲ್ಲೂ ಪ್ರತಿಮೆ ಸ್ಥಾಪಿಸುವುದರಿಂದ ಸಮಾಜದಲ್ಲಿ ಗಲಭೆ ಮೂಡಿಸುವ ವಿಚಿತ್ರಕಾರಿ ಮನಸ್ಸಿನವರಿಗೆ ದಾರಿದೀಪವಾಗುತ್ತದೆ. ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟಿ ಜಾತಿ ಜಾತಿಗಳ ನಡುವೆ ವಿಷ ಬೀಜಗಳನ್ನು ಬಿತ್ತಲು, ಪುತ್ಥಳಿ, ಪ್ರತಿಮೆಗಳ ಮೇಲೆ ಮಸಿ ಹಾಕಿ ಅಪಮಾನ ಮಾಡಿದ್ದೇ ಆದರೆ, ಯಾರು ಹೊಣೆಗಾರರು. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಅಥವಾ ಗುಂಪು ಘರ್ಷಣೆಗಳು ನಡೆಯುವ ಸಾಧ್ಯತೆಯಿದ್ದು ಪ್ರತಿಮೆಗಳನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಪುತ್ಥಳಿಗಳನ್ನು ಸ್ಥಾಪಿಸುವುದೇ ಆದರೆ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಲಿ, ಪೊಲೀಸ್ ಸುರಕ್ಷತೆ ಸಿಸಿಟಿವಿ ಕಣ್ಗಾವಲಿನಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇರುತ್ತದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪುತ್ಥಳಿಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ತಾಲೂಕು ಆಡಳಿತ ಪ್ರತಿಮೆಗಳ ನಿರ್ಮಾಣಕ್ಕೆ ಅವಕಾಶ ನೀಡದೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರಮ ಗಂಗಾಧರ್, ಮಣಿಕಂಠ, ಪ್ರಶಾಂತ್, ಸಿ.ಜಿ.ಕುಮಾರ್, ಗನ್ನಿ ವಿಶ್ವನಾಥ್ಇದ್ದರು.