ಸಾರಾಂಶ
ಐಎನ್ಡಿಐಎ ಒಕ್ಕೂಟದ ನಾಯಕತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಕ್ಕಾಗಿ ಈ ಬೆಳವಣಿಗೆ ಆಗಿದೆ ಎನ್ನಲು ಸಾಧ್ಯವಿಲ್ಲ. ಲಾಲು ಪ್ರಸಾದ್ ಮತ್ತು ಇತರೆ ಪರಿವಾರದವರು ನಿತೀಶಕುಮಾರ್ ಅವರಿಗೆ ತೊಂದರೆ ಕೊಡುತ್ತಿದ್ದರು. ಅದರ ಪರಿಣಾಮವಾಗಿ ಈ ರೀತಿಯ ಬೆಳವಣಿಗೆಯಾಗಿದೆ
ನಿತೀಶಕುಮಾರ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ: ಜೋಶಿ
ಹುಬ್ಬಳ್ಳಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ನಾಯಕರು ಎಂದಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಭ್ರಷ್ಟಾಚಾರ ಮತ್ತು ಪರಿವಾರವಾದಿ ವಿರುದ್ಧ ಮಾತ್ರ ಹೇಳಿಕೆ ನೀಡಲಾಗಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ಪರಿವಾರವಾದಿ ಜತೆ ಇವರಿಗೆ (ನಿತೀಶ್ ಕುಮಾರ್) ಹೊಂದಾಣಿಕೆಯಾಗಲ್ಲ ಎಂಬುದು ಗೊತ್ತಿತ್ತು. ನಿತೀಶಕುಮಾರ ಬಗ್ಗೆ ನಾವು ಟೀಕೆ-ಟಿಪ್ಪಣಿ ಮಾಡಿದ್ದೇವೆ. ಆದರೆ, ಎಂದಿಗೂ ವೈಯಕ್ತಿಕವಾಗಿ ಟೀಕಿಸಿಲ್ಲ. ಬಿಹಾರದಲ್ಲಿ ಅಪವಿತ್ರ ಮೈತ್ರಿ ಇತ್ತು. ಅದು ಈಗ ಅಂತ್ಯವಾಗಿದ್ದು, ಜೆಡಿಯು ಎನ್ಡಿಎ ಮಿತ್ರಪಕ್ಷ ಭಾಗವಾಗಿ ಆಡಳಿತ ನಡೆಸಲಿದೆ ಎಂದರು.
ಐಎನ್ಡಿಐಎ ಒಕ್ಕೂಟದ ನಾಯಕತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಕ್ಕಾಗಿ ಈ ಬೆಳವಣಿಗೆ ಆಗಿದೆ ಎನ್ನಲು ಸಾಧ್ಯವಿಲ್ಲ. ಲಾಲು ಪ್ರಸಾದ್ ಮತ್ತು ಇತರೆ ಪರಿವಾರದವರು ನಿತೀಶಕುಮಾರ್ ಅವರಿಗೆ ತೊಂದರೆ ಕೊಡುತ್ತಿದ್ದರು. ಅದರ ಪರಿಣಾಮವಾಗಿ ಈ ರೀತಿಯ ಬೆಳವಣಿಗೆಯಾಗಿದೆ ಎಂದರು.ಮುಸ್ಲಿಮರ ತುಷ್ಟೀಕರಣ:
ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ ಕಂಬಕ್ಕೆ ಭಗವಾಧ್ವಜ ಅಳವಡಿಸಿದ್ದನ್ನು ಪೊಲೀಸರು ತೆರವುಗೊಳಿಸಿರುವ ವಿಚಾರ ಬಗ್ಗೆ ಮಾಹಿತಿ ಇಲ್ಲ. ಆದರೆ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಂದೂ ವಿರೋಧಿ ಕೆಲಸ ನಡೆಯುತ್ತಿದೆ. ಸರ್ಕಾರ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು.ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಏಕೆ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ಮೊದಲ ಅಕ್ಷರ ಬಿಟ್ಟು ಮಾಡಿ. ಹಿಂದ ಅಕ್ಷರಗಳು ಅವರಿಗೆ ಸಂಬಂಧವಿಲ್ಲ ಎಂದು ವ್ಯಂಗ್ಯವಾಡಿದರು.