ಸಾರಾಂಶ
ಮಂಗಳೂರಿನಲ್ಲಿ ನಡೆದ ಲಿಟ್ ಫೆಸ್ಟ್-2025ರ ಎರಡನೇ ದಿನ ಭಾನುವಾರ ‘ಐಕಾನ್ಸ್ ಫಾರ್ ಇಂಡಿಯಾ: ಡಸ್ ಆ್ಯಂಡ್ ಡಸ್ ನಾಟ್ಸ್’ ವಿಚಾರದಲ್ಲಿ ಇತಿಹಾಸ ಸಂಶೋಧಕ ಡಾ. ವಿಕ್ರಂ ಸಂಪತ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮ ಪೂರ್ವಜರಿಗೆ ವಂಚಿಸಿದ ಟಿಪ್ಪು ಸುಲ್ತಾನ್ನ ಜಯಂತಿ ಆಚರಣೆ ಕುರಿತ ವಾದ ವಿವಾದಗಳು ಇನ್ನೂ ಕೊನೆಯಾಗಿಲ್ಲ. ಇದು ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಜನರಲ್ ಡಯರ್, ಹಿಟ್ಲರ್ ಹೆಸರಿನಲ್ಲಿ ಜಯಂತಿ ಆಚರಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಇತಿಹಾಸ ಸಂಶೋಧಕ ಡಾ. ವಿಕ್ರಂ ಸಂಪತ್ ಹೇಳಿದ್ದಾರೆ.ಮಂಗಳೂರಿನಲ್ಲಿ ನಡೆದ ಲಿಟ್ ಫೆಸ್ಟ್-2025ರ ಎರಡನೇ ದಿನ ಭಾನುವಾರ ‘ಐಕಾನ್ಸ್ ಫಾರ್ ಇಂಡಿಯಾ: ಡಸ್ ಆ್ಯಂಡ್ ಡಸ್ ನಾಟ್ಸ್’ ವಿಚಾರದಲ್ಲಿ ಅವರು ಮಾತನಾಡಿದರು.
ಭಾರತದ ಇತಿಹಾಸಕ್ಕೆ ಸಂಬಂಧಿಸಿ ಮೊಗಲ್, ತುಘಲಕ್ ಆಡಳಿತದ ಬಗ್ಗೆ ಮಕ್ಕಳಿಗೆ ಕಂಠಪಾಠ ಮಾಡಿಸುತ್ತೇವೆ. ಆದರೆ ನಮ್ಮದೇ ಚರಿತ್ರೆಯ ಬಗ್ಗೆ ಉಲ್ಲೇಖಿಸುವುದೇ ಇಲ್ಲ. ಇದರಿಂದಾಗಿ ಯುವಜನತೆ ತಪ್ಪು ಇತಿಹಾಸವನ್ನು ತಿಳಿದುಕೊಳ್ಳುವಂತಾಗಿದೆ. ಇತಿಹಾಸ, ಸಂಸ್ಕೃತಿ ವಿಚಾರದಲ್ಲಿ ಅತಿರೇಕ ಮಾತನಾಡುವ ಬುದ್ಧಿಜೀವಿಗಳು ನಮ್ಮತನವನ್ನು ತಿಳಿದುಕೊಳ್ಳಲು ಮುಂದಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.ಖ್ಯಾತ ಚಿತ್ರ ನಿರ್ದೇಶಕ, ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ಟಿಪ್ಪುವಿನ ವಿಚಾರದಲ್ಲಿ ರಾಜರುಗಳು ತಮ್ಮದೇ ನಿಲುವು ಹೊಂದಿದ್ದರು. ರಾಜರುಗಳ ಬಗ್ಗೆ ಉತ್ತಮ ಭಾವನೆ ಇತ್ತು. ಕರಾವಳಿ, ಮಲೆನಾಡುಗಳಲ್ಲಿ ಟಿಪ್ಪು ಆಕ್ರಮಣ, ಧಾರ್ಮಿಕ ಕೇಂದ್ರಗಳ ಧ್ವಂಸದ ಬಗ್ಗೆ ಕೇಳಿದ್ದೇವೆ. ನಾವು ಸತ್ಯ ಹೇಳಿದರೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾವು ಚರಿತ್ರೆಯನ್ನು ಇನ್ನಷ್ಟು ತಿಳಿದುಕೊಂಡು ಬರೆಯಬೇಕು ಎಂದರು.