ಹೈಟೆಕ್ ಮಾದರಿಯ ಸುಸಜ್ಜಿತ ಸಮಾವೇಶ ಕೇಂದ್ರ ಲೋಕಾರ್ಪಣೆ


ಕನ್ನಡಪ್ರಭ ವಾರ್ತೆ ಹಳಿಯಾಳ

ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತರ ಕರ್ನಾಟಕ ಭಾಗ ಹಾಗೂ ಕರಾವಳಿ ಜಿಲ್ಲೆಗಳು ಬಲವನ್ನು ತುಂಬಿವೆ. ರಾಜ್ಯದ ಪ್ರವಾಸಿ ತಾಣಗಳು ಇಂದು ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಪ್ರವಾಸೋದ್ಯಮ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಮಾದರಿಯ ಸುಸಜ್ಜಿತ ಸಮಾವೇಶ ಕೇಂದ್ರವನ್ನು ಭಾನುವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮದ ಮೂಲಕ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ, ಇತಿಹಾಸದ ಪರಿಚಯವನ್ನುಂಟು ಮಾಡುವಂತಹ ಯೋಜನೆ ರೂಪಿಸುತ್ತಿದೆ. ಅದಕ್ಕಾಗಿ ಈ ಬಾರಿ ಬಜೆಟನಲ್ಲಿ ರಾಜ್ಯದಲ್ಲಿನ ಧಾರ್ಮಿಕ ಪ್ರವಾಸಿ ತಾಣಗಳಲ್ಲಿ 100 ಸುಸಜ್ಜಿತವಾದ ಡ್ರಾಮೆಟರಿಗಳನ್ನು ನಿರ್ಮಿಸಲು ಅನುದಾನ ಮೀಸಲಾಗಿಡಲಾಗಿದೆ. ಹಳಿಯಾಳ ದಾಂಡೇಲಿ ತಾಲೂಕಿನಲ್ಲಿ ಉದ್ಯಾನಗಳ ಅಭಿವೃದ್ಧಿಗೆ ₹1ಕೋಟಿ, ಸಿಂಥೇರಿ ರಾಕ್ಸ್ ನಲ್ಲಿ ಹಾಗೂ ಕ್ಯಾಸಲ್‌ರಾಕ್‌ನಲ್ಲಿನ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ತಲಾ ₹50ಲಕ್ಷ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸರ್ಕಾರಕ್ಕೆ ಯಾವ ಕ್ಷೇತ್ರದಿಂದ ಆದಾಯ ಬರುತ್ತದೆಯೋ, ಆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮೊದಲ ಪ್ರಾಶಸ್ತ್ಯ ನೀಡಬೇಕು. ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳು ಉದ್ಯೋಗ ಸೃಷ್ಟಿಯ ಜೊತೆಯಲ್ಲಿ ಸರ್ಕಾರಕ್ಕೂ ಆದಾಯ ತರುತ್ತಿವೆ. ಈ ಕ್ಷೇತ್ರಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಹಳಿಯಾಳದಲ್ಲಿ ಆರಂಭಗೊಂಡಿರುವ ಸಮಾವೇಶ ಕೇಂದ್ರದಲ್ಲಿ ಕಲೆ, ಸಾಹಿತ್ಯ, ಚರ್ಚಾಗೋಷ್ಠಿಗಳು ನಡೆಯಬೇಕು, ಆದಷ್ಟು ಈ ಕೇಂದ್ರವನ್ನು ಶುಚಿಯಾಗಿಡಲು ಪ್ರಯತ್ನಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೈಗೊಳ್ಳಲಾಗಿರುವ ಯೋಜನೆಗಳ ಮಾಹಿತಿ ನೀಡಿ, ಹಳಿಯಾಳದಲ್ಲಿ ಪ್ರಾರಂಭಗೊಂಡಿರುವ ಸಮಾವೇಶ ಕೇಂದ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮ ನಡೆಯುವಂತಾಗಬೇಕು. ಈ ಕೇಂದ್ರದ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವೇದಿಕೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾಗೌರಿ ಭಟ್, ಲೋಕೋಪಯೋಗಿ ಶಿರಸಿ ಉಪವಿಭಾಗದ ಇಇ ಎಸ್.ಎನ್. ಸಿದ್ಧಾಪೂರ, ಹಳಿಯಾಳ ವಿಭಾಗದ ಎ.ಇ. ಎಸ್.ವಿ. ಆಥಣಿ, ಸಂಜೀವ ನಾಯ್ಕ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹಾಗೂ ಬಾಷ್ ಇಂಡಿಯಾ ಫೌಂಡೇಶನ್ ಅಧಿಕಾರಿಗಳು ಇದ್ದರು. ಆಕಾಶವಾಣಿಯ ಉದ್ಘೋಷಕಿ ಮಾಯಾ ಚಿಕ್ಕೇರೂರ, ರಾಧಾ ದೇಶಬಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಬಾಷ್ ಇಂಡಿಯಾ ಫೌಂಡೇಶನ್ ವತಿಯಿಂದ ತಾಲೂಕಿನ ಐದು ಶಾಲೆಗಳಿಗೆ ಸ್ಮಾರ್ಟ್‌ ರೂಮ್ ಹಸ್ತಾಂತರ ಮಾಡಲಾಯಿತು. ಮನರಂಜನೆ:

ಕೇಂದ್ರ ಉದ್ಘಾಟನಾ ಸಮಾರಂಭದ ನಿಮಿತ್ತ ಹೊನ್ನಾವರದ ಮುಖ್ಯಪ್ರಾಣ ಚಂಡೆ ತಂಡ, ಶಾಂತಲಾ ನೃತ್ಯ ತಂಡ ಧಾರವಾಡ ಇವರಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಿತು. ಕುದ್ರೋಳ್ಳಿ ಗಣೇಶ ತಂಡದವರಿಂದ ಮ್ಯಾಜಿಕ್ ಮೈಂಡ್ ಮಿಸ್ಟರಿ ಪ್ರದರ್ಶನ ನಡೆಯಿತು.