ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಅವೈಜ್ಞಾನಿಕ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ಹೇಮಾವತಿ ನೀರು ಅವಲಂಬಿತ ಜಿಲ್ಲೆಯ 9 ತಾಲೂಕುಗಳಿಗೆ ಹನಿ ನೀರೂ ಹರಿಯುವುದಿಲ್ಲ. ಹೀಗಾಗಿ ಈ ಬಕಾಸುರ ಯೋಜನೆಯನ್ನು ರದ್ದು ಮಾಡಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೂಲ ಯೋಜನೆಯ ನಾಲೆ ಮೂಲಕ ಕುಣಿಗಲ್ಗೆ ನೀರು ಹರಿಸಬೇಕು, ಎಕ್ಸ್ ಪ್ರೆಸ್ ಕೆನಾಲ್ ಮೂಲಕ ವಾಮಮಾರ್ಗದಲ್ಲಿ ನೀರು ಹರಿಸಲು ಬಿಡುವುದಿಲ್ಲ ಎಂದರು.ಎಕ್ಸ್ ಪ್ರೆಸ್ ಕೆನಾಲ್ ಸಂಬಂಧದ ತಾಂತ್ರಿಕ ಸಮಿತಿ ವರದಿ ಬಗ್ಗೆ ಚರ್ಚೆ ನಡೆಸಲು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಸರ್ವಸದಸ್ಯರ ಸಭೆ ಕರೆಯಬೇಕು ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ಅವರನ್ನು ಒತ್ತಾಯಿಸಿದರು.ಎಕ್ಸ್ ಪ್ರೆಸ್ ಕೆನಾಲ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಡಾ.ಜಿ.ಪರಮೇಶ್ವರ್ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.ಕುಣಿಗಲ್ಗೆ ನೀರು ಹರಿಸಬೇಕೆಂದು ಸಾವಿರ ಕೋಟಿ ರು.ವೆಚ್ಚ ಮಾಡಿ ಹೇಮಾವತಿ ನಾಲೆಯನ್ನುಆಧುನಿಕರಣ ಮಾಡಲಾಗಿದೆ.ಇಷ್ಟಾಗಿಯೂ ನೀರು ಹರಿಯದಿದ್ದರೆ ಯಾರು ಹೊಣೆ? ನಾಲೆ ಆಧುನಿಕರಣ ಮಾಡಿದ ಅಧಿಕಾರಿಗಳ ವಿರುದ್ಧಕ್ರಮ ತೆಗೆದುಕೊಳ್ಳಿ, ಜನರ ತೆರಿಗೆ ದುಡ್ಡು ಪೋಲು ಮಾಡಬೇಡಿ ಎಂದ ಸುರೇಶ್ಗೌಡರು, ಸಚಿವ ಡಾ.ಪರಮೇಶ್ವರ್ಅವರು ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಮಾತನಾಡಬಾರದು. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾತನಾಡಬೇಕು ಹಾಗೂ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರದ್ದು ಮಾಡಬೇಕು ಎಂದರು.ಬಿಜೆಪಿಯವರು ನೀರಿನ ರಾಜಕಾರಣ ಮಾಡುತ್ತಿಲ್ಲ. ಇದು ಪಕ್ಷಾತೀತ ಹೋರಾಟ. ಎಕ್ಸ್ ಪ್ರೆಸ್ ಕೆನಾಲ್ ಯೋಜನೆಗೆ ತಾತ್ವಿಕ ಅಂತ್ಯ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ. ಹೆದರಿಸಿ, ಬೆದರಿಸಿ, ಪೊಲೀಸ್ ಕೇಸ್ ಹಾಕಿಸಿ ಹೋರಾಟ ತಡೆಯಲು ಸಾಧ್ಯವಿಲ್ಲ. ಹೋರಾಟ ತೀವ್ರವಾಗುತ್ತದೆ.ಗುಬ್ಬಿ ಬಂದ್, ಜಿಲ್ಲೆ ಬಂದ್ ಮಾಡುತ್ತೇವೆ, ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ, ಸರ್ಕಾರ ಬೀಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಾಸಕ ಸುರೇಶ್ಗೌಡ ಎಚ್ಚರಿಕೆ ನೀಡಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಸ್.ರವಿಶಂಕರ್ ಹೆಬ್ಬಾಕ, ರೈತ ಸಂಘದ ಜಿಲ್ಲಾಧ್ಯಕ್ಷಎ.ಗೋವಿಂದರಾಜು, ಮುಖಂಡರಾದ ದಿಲೀಪ್ಕುಮಾರ್, ಬ್ಯಾಟರಂಗೇಗೌಡ, ಚಂದ್ರಶೇಖರಬಾಬು, ಎಸ್.ಆರ್.ಗೌಡ, ಭೈರಪ್ಪ, ಯೋಗಾನಂದಕುಮಾರ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.