ನಕ್ಸಲ್‌ರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಶರಣಾಗತಿ ಮಾಡಿಸಿ, ರಾಜಕೀಯ ಲಾಭ ಪಡೆಯುವುದು ಬೇಡವಾಗಿತ್ತು. ನಾನು ಅಧಿಕಾರದಲ್ಲಿ ಇದ್ದಾಗ ಹಲವು ಭಯೋತ್ಪಾದಕರನ್ನು ಬಂಧಿಸಿದಾಗ, ಠಾಣೆಗೆ ಕರೆ ತಂದಿದ್ದೇನೆ ಹೊರತು ಮುಖ್ಯಮಂತ್ರಿಗಳ ಗೃಹ ಕಚೇರಿಗಲ್ಲ.

ಧಾರವಾಡ:

ರಾಜ್ಯ ಸರ್ಕಾರವು ನಕ್ಸಲ್‌ರನ್ನು ವಿಧಾನಸೌಧದಲ್ಲಿ ಶರಣಾಗತಿ ಮಾಡಿಸದೇ ಇರುವುದು ನಮ್ಮ ಪುಣ್ಯ ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ಉತ್ತಮ ಕೆಲಸ. ಗೃಹ ಕಚೇರಿ ಕೃಷ್ಣದಲ್ಲಿ ಶರಣಾಗತಿ ಮಾಡಿರುವುದು ತಪ್ಪು. ಸರ್ಕಾರ ಈ ಕೆಲಸದಲ್ಲಿ ಕ್ರೆಡಿಟ್ ಮಾತ್ರ ತೆಗೆದುಕೊಳ್ಳಲಿ. ಈ ರೀತಿ ಪ್ರಚಾರ ಬೇಕಿರಲಿಲ್ಲ. ನಕ್ಸಲ್‌ರನ್ನು ನ್ಯಾಯಾಲಯ ಅಥವಾ ಕೋರ್ಟ್ ಮುಂದೆ ಹಾಜರಪಡಿಸುವ ಬದಲಿಗೆ ಸಿಎಂ ಕಚೇರಿಯಲ್ಲಿ ಹಾಜರು ಮಾಡಿದ್ದು ಸರಿಯಲ್ಲ ಎಂದರು.

ನಕ್ಸಲ್‌ರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಶರಣಾಗತಿ ಮಾಡಿಸಿ, ರಾಜಕೀಯ ಲಾಭ ಪಡೆಯುವುದು ಬೇಡವಾಗಿತ್ತು. ನಾನು ಅಧಿಕಾರದಲ್ಲಿ ಇದ್ದಾಗ ಹಲವು ಭಯೋತ್ಪಾದಕರನ್ನು ಬಂಧಿಸಿದಾಗ, ಠಾಣೆಗೆ ಕರೆ ತಂದಿದ್ದೇನೆ ಹೊರತು ಮುಖ್ಯಮಂತ್ರಿಗಳ ಗೃಹ ಕಚೇರಿಗಲ್ಲ. ಈ ಸರ್ಕಾರ ಭವಿಷ್ಯದಲ್ಲಿ ವಿಧಾನಸೌಧದಲ್ಲಿ ಶರಣಾಗತಿ ಮಾಡಿಸಿದರೂ ಅಚ್ಚರಿ ಏನಲ್ಲ ಎಂದರು.

ನಕ್ಸಲರ ಹಾಗೂ ಸರ್ಕಾರದ ನಡುವಿನ ಮಾತುಕತೆ ಏನು ಗೊತ್ತಿಲ್ಲ. ಪರಿಹಾರ ಕೊಡುವುದು ಮಧ್ಯಸ್ಥಿಕೆ ವಹಿಸಿದವರಿಗೆ ಗೊತ್ತು ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಕಮಿಷನ್ ಹಾವಳಿಯೂ ಸಹ ಹೆಚ್ಚಿದೆ. ಕಾಂಗ್ರೆಸ್ ಊಟೋಪಚಾರ, ಸಭೆ-ಸಮಾರಂಭಕ್ಕೂ ಹೈಕಮಾಂಡ್ ಅನುಮತಿ ನಾಚಿಕೆಗೇಡು. ಹೀಗೆ ಪಕ್ಷ ನಡೆಸುವುದೇ ಅಸಹ್ಯಕರ ಎಂದು ಜ್ಯೋತಿ ಪ್ರಕಾಶ, ಜಿಪಂ-ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದೆ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕಲು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು.