ಸಾರಾಂಶ
ಬಜೆಟ್ ನಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೇ ಸಿದ್ದರಾಮಯ್ಯ ಕಸರತ್ತಾಗಿದೆ ಎಂದಿದ್ದಾರೆ ಕೇಂದ್ರ ಸಚಿವ ಜೋಶಿ.
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರಾಜಕೀಯ ಭಾಷಣದಂತಿದ್ದು, ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಡದ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ಘೋಷಿಸಿದ 5 ಗ್ಯಾರಂಟಿಗಳಿಗೆ ವರ್ಷವಿಡೀ ಹಣ ಹೇಗೆ ಕ್ರೋಡೀಕರಿಸಬೇಕೆಂಬ ಅಂಶ ಬಿಟ್ಟರೆ ಬೇರೆ ಏನೂ ಇಲ್ಲ. ರಾಜ್ಯವನ್ನು ಮುಂಬರುವ ವರ್ಷದಲ್ಲಿ ಹೇಗೆ ಆರ್ಥಿಕ ಶಕ್ತಿ ಕೇಂದ್ರವನ್ನಾಗಿಸಬೇಕೆಂಬ ಬಗ್ಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲ. ಅನೇಕ ಯೋಜನೆಗಳು ಹಿಂದಿನ ಸರ್ಕಾರದ ಪ್ರಸ್ತಾವನೆಗಳ ಪುನರಾವರ್ತನೆಯಾಗಿದೆ ಎಂದಿದ್ದಾರೆ.ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೇ ಸಿದ್ದರಾಮಯ್ಯ ಕಸರತ್ತಾಗಿದೆ. ವಿವಿಧ ಇಲಾಖೆಗಳಿಂದ ಎಷ್ಟು ಆದಾಯಗಳಿಸಬೇಕೆಂಬ ವಿವರದೊಂದಿಗೆ ₹3.71 ಲಕ್ಷ ಕೋಟಿ ಬೃಹತ್ ಗಾತ್ರದ ಹೆಗ್ಗಳಿಕೆ ಬಿಟ್ಟರೆ ಈ ಬಜೆಟ್ ಯಾವುದೇ ದಿಕ್ಕು ದೆಶೆ ಇಲ್ಲದ ಒಂದು ದಾಖಲೆ ಪಟ್ಟಿಯಷ್ಟೆ. ಇಂತಹ ಬಜೆಟ್ನಿಂದ ಯಾವುದೇ ಜನಕಲ್ಯಾಣವೂ ಇಲ್ಲ, ಆರ್ಥಿಕ ಪ್ರಗತಿಯೂ ಇಲ್ಲ ಎಂದು ಸಚಿವ ಜೋಶಿ ತಿಳಿಸಿದ್ದಾರೆ.