ಈಗಾಗಲೇ ಸಮರ್ಪಕವಾಗಿ ಮುಂಗಾರು ಮತ್ತು ಹಿಂಗಾರು ಮಳೆಗಳಾಗದೇ ಬರದ ಬೇಗೆಯಲ್ಲಿರುವ ಕೃಷಿಕರಿಗೆ ಬ್ಯಾಂಕ್‌ಗಳು ಸಾಲ ವಸೂಲಾತಿ ನೋಟಿಸ್‌ ನೀಡಿ ರೈತರನ್ನು ಕಂಗಾಲಾಗಿಸುತ್ತಿವೆ.

ಕಲಬುರಗಿಯಲ್ಲಿ ಲೀಡ್‌ ಬ್ಯಾಂಕ್‌ ಮುಂದೆ ರೈತರ ಪ್ರತಿಭನೆಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಬರಗಾಲ ಬಿದ್ದಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಈ ಹಂತದಲ್ಲಿ ರೈತರಿಗೆ ಬ್ಯಾಂಕುಗಳು ಬೆಳೆಸಾಲ, ಕೃಷಿ ಸಾಲ ವಸೂಲಾತಿಗೆ ನೋಟಿಸ್‌ ನೀಡುತ್ತಿರೋದು ನಿಲ್ಲಬೇಕು, ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಪ್ರಾಂತರೈತ ಸಂಘದ ಪದಾಧಿಕಾರಿಗಳು ಕಲಬುರಗಿ ಲೀಡ್‌ ಬ್ಯಾಂಕ್‌ ಕಚೇರಿ ಮುಂದೆ ಧರಣಿ ನಡೆಸಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ರೈತರು ತಮ್ಮ ಭೂಮಿಯಲ್ಲಿ ಬೆಳೆ ಬಿತ್ತನೆ ಮಾಡುವಾಗ ಔಷಧಿ, ರಾಶಿ ಸಮಯದಲ್ಲಿ ದುಬಾರಿ ಬಡ್ಡಿಸಾಲ ಮಾಡಿದ್ದಾರೆ. ಇದರಿಂದ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ. ಒಕ್ಕಲುತನ ದುಬಾರಿಯಾಗುತ್ತಿದೆ. ದೇಶಕ್ಕೆಅನ್ನ ಹಾಕುವ ಅನ್ನದಾತ ಉಳಿದರೆ ಬ್ಯಾಂಕ್‌ ಉಳಿಯುತ್ತವೆ. ಸಾಲ ಕಟ್ಟದ ಕಾರ್ಪೋರೆಟ್‌ ಉದ್ದಿಮಿಗಳ ಸಾಲ ಮಾಫ್‌ ಮಾಡುವ, ರಿಯಾಯ್ತಿ ನೀಡುವ ಸರಕಾರಗಳಿಗೆ ರೈತರೇ ಕಾಣೋದಿಲ್ಲವೆಂದು ಹೋರಾಟಗಾರರು ಟೀಕಿಸಿದ್ದಾರೆ.

ರಸಗೊಬ್ಬರ, ಬಿಜ, ಔಷಧಿ ಬೆಲೆ ಗಗನಕ್ಕೇರಿ ರೈತರು ತೊಂದರೆಯಲ್ಲಿದ್ದಾರೆ. ತೊಗರಿ ನಾಡಲ್ಲಿ ಸರಿಯಾದ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ರೈತರು ಹೆಸರು, ಉದ್ದು, ಸೊಯಾಬಿನ್, ತೊಗರಿ ಸರಿಯಾಗಿ ಬೆಳೆಯದೇ ತೊಂದರೆಯಲ್ಲಿದ್ದಾರೆ. ಆರ್ಥಿಕವಾಗಿ ರೈತರು ನೆಲ ಕಚ್ಚಿದ್ದಾರೆ. ಅವರ ನೆರವಿಗೆ ನಿಲ್ಲೋದು ಬಿಟ್ಟು ರೈತರಿಗೆ ನೋಟಿಸ್‌ ನೀಡಿ ಹೀಗೆ ಸತಾಯಿಸೋದು ಸರಿಯಲ್ಲವೆಂದು ಹೋರಾಟಗಾರ ರೈತರು ಆಗ್ರಹಿಸಿದ್ದಾರೆ.

ರೈತರ ಸಾಲ ವಸೂಲಿ ನೋಟಿಸ್‌ ಕೊಡೋದು ನಿಲ್ಲಿಸಬೇಕು, ಅದಕ್ಕೆ ಬದಲಾಗಿ ರೈತರಿಗೆ ರೈತರಿಗೆ ಸರಳವಾಗಿ ಬೆಳೆಸಾಲ, ಮಾರ್ಟ್‌ಗೆಜ್‌ ಸಾಲ, ಭೂ ಅಭಿವೃದ್ಧಿ ಸಾಲ, ಉದ್ಯೊಗಿನಿ ಸಾಲ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಾಲ ಕೊಡಬೇಕು ಎಂದೂ ಸಂಘದ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಸುಭಾಷ ಹೊಸಮನಿ, ದಿಲೀ ನಾಗೂರೆ, ಸಂಘದ ಜಿಲ್ಲಾ ಖಜಾಂಚಿ, ಸಹ ಕಾರ್ಯದರ್ಶಿ ಎಂಬಿ ಸಜ್ಜನ, ಪ್ರಕಾಶ ಜಾನೆ, ರೆವಣಸಿದ್ದಪ್ಪಾ ಪಾಟೀಲ್‌, ಸಿದ್ರಾಮಪ್ಪ ಹುರುಮುಂಜಿ ಇದ್ದರು.