ಸಾರಾಂಶ
ಹಾವೇರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿರ್ದೇಶನದಂತೆ ಡಿ. ೨೫ರಂದು ಜಿಲ್ಲೆಯ ಎಲ್ಲ ಬೂತ್ಮಟ್ಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸುಶಾಸನ ದಿನ ಆಚರಿಸಿ ಸಭೆ ಆಯೋಜಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸಂಘಟನಾ ಪರ್ವದ ಸಭೆಯಲ್ಲಿ ಅವರು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿದ್ದ ವೇಳೆ ಜಾರಿಗೊಳಿಸಿರುವ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಸ್ಮರಣಾರ್ಥವಾಗಿ ಡಿ. ೨೬ರಂದು ವೀರ್ ಬಾಲ್ ದಿವಸ್ ಎಲ್ಲ ಮಂಡಲಗಳಲ್ಲಿ ಆಚರಣೆ ಮಾಡಬೇಕು. ಎಲ್ಲ ಮಂಡಲಗಳಲ್ಲಿ ಬೂತ್ ಸಮಿತಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.ಜಿಲ್ಲಾ ಸಹ ಚುನಾವಣಾಧಿಕಾರಿ ಎನ್.ಎಂ. ಈಟೇರ ಮಾತನಾಡಿ, ಬೂತ್ ಸಮಿತಿ ರಚನೆಯನ್ನು ಯಾವ ರೀತಿ ಮಾಡಬೇಕೆಂದು ವಿಸ್ತಾರವಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಾಹಪುರ ಮಾತನಾಡಿ, ಬೂತ್ ಸಮಿತಿಯ ರಚನೆ ಸಂದರ್ಭದಲ್ಲಿ ಮಂಡಲ ಮತ್ತು ಶಕ್ತಿ ಕೇಂದ್ರ ಸಂಘಟನಾ ಪರ್ವ ಸಹಯೋಗಿಗಳು ಗಮನಿಸಬೇಕಾದ ಅಂಶಗಳ ಕುರಿತು ತಿಳಿಸಿದರು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ವಿಧಾನಸಭಾ ಕ್ಷೇತ್ರ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೋದಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡರ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಷ ಚವ್ಹಾಣ, ಜಿಲ್ಲಾ ಸಹ ಚುನಾವಣಾಧಿಕಾರಿ ಮಂಜುನಾಥ ಬ್ಯಾಹಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ಡಾ. ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಸಹಯೋಗಿಗಳು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಇದ್ದರು.